This is the title of the web page
This is the title of the web page

Please assign a menu to the primary menu location under menu

State

ಕಾಲಮಿತಿಯೊಳಗಾಗಿ ಜನನ-ಮರಣ ನೋಂದಣಿ ಕಾರ್ಯ ಜರುಗಲಿ ನೋಂದಣಿ ಕಾರ್ಯದಲ್ಲಿ ವಿಳಂಭವಾದಲ್ಲಿ ಶಿಸ್ತು ಕ್ರಮದ ಎಚ್ಚರಿಕೆ


ಗದಗ ಜು. ೨೦: ಜನನ-ಮರಣ ನೋಂದಣಿ ವೈಯಕ್ತಿಕ ಅನುಕೂಲಗಳಿಗಾಗಿ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಸುರಕ್ಷತೆಯನ್ನು ಒದಗಿಸಲು ಅತೀ ಪ್ರಮುಖವಾದ ದಾಖಲೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ನೋಂದಣಾಧಿಕಾರಿಗಳು ಜನನ-ಮರಣ ನೋಂದಣಿಯನ್ನು ಕಾಲಮಿತಿಯೊಳಗಾಗಿಯೇ ದಾಖಲಿಸಬೇಕು. ತಪ್ಪಿದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವದು ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನನ-ಮರಣ ಪ್ರಮಾಣ ಪತ್ರಗಳು ಅತೀ ಪ್ರಮುಖ ದಾಖಲೆಗಳಾಗಿದ್ದು ಇವುಗಳ ಕುರಿತು ಮಾಹಿತಿಯನ್ನು ನೋಂದಣಿ ಮಾಡುವ ಮುನ್ನ ಕುಲಂಕೂಷವಾಗಿ ಪರಿಶೀಲನೆ ಮಾಡಬೇಕು ಎಂದರು. ನೋಂದಣಿಗಾಗಿ ನಿಯೋಜಿತ ನೋಂದಣಾಧಿಕಾರಿಗಳು ಪ್ರಮಾಣ ಪತ್ರಕ್ಕೆ ಸಹಿ ಮಾಡುವದರ ಮೂಲಕ ನೋಂದಣಿಗಾಗಿ ನಿಗದಿಪಡಿಸಲಾದ ತಂತ್ರಾಂಶದಲ್ಲಿ ಕಾಲಮಿತಿಯೊಳಗಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ಜನನ-ಮರಣ ನೋಂದಣಿಯನ್ನು ಕಾಲಮಿತಿಯೊಳಗೆ ದಾಖಲಿಸಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ತಹಶೀಲ್ದಾರರು ಪ್ರತಿ ಮಾಹೆ ಸಭೆ ಜರುಗಿಸಿ ಸಭೆಯ ವರದಿಯನ್ನು ಜಿಲ್ಲಾಡಳಿತಕ್ಕೆ ತಪ್ಪದೇ ಸಲ್ಲಿಸಬೇಕು. ಹಾಗೂ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತು ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಸಂಬಂಧಿಸಿದವರ ಜೊತೆಗೆ ನಿಯಮಿತವಾಗಿ ಸಮನ್ವಯ ಸಾಧಿಸಿ ನೋಂದಣಿ ಕಾರ್ಯಗಳನ್ನು ಕಾಲಮಿತಿಯೊಳಗಾಗಿ ದಾಖಲಿಸಲು ಕ್ರಮ ಕೈಗೊಳ್ಳಲು ತಿಳಿಸಿದ ಅವರು ಜನನ-ಮರಣ ನೊಂದಣಿ ಕಾರ್ಯವು ಗಂಭೀರ ವಿಷಯವಾಗಿದ್ದು ಈ ಕಾರ್ಯದಲ್ಲಿ ನಿಯೋಜಿತ ಅಧಿಕಾರಿ ಸಿಬ್ಬಂದಿಗಳು ಉಸದಾಸೀನ ಮನೋಭಾವ ತೋರದೆ ಕಾಲಮಿತಿಯೊಳಗಾಗಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ತಂದ ನಂತರ ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಪ್ರಯೋಗ ಕುರಿತ ಪ್ರಗತಿ ಪರಿಶೀಲಿಸಿದ ಅವರು ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕಂದಾಯ ಹಾಗೂ ಕೃಷಿ ಇಲಾಖೆಗಳು ಸಮನ್ವಯದೊಂದಿಗ ಕಾರ್ಯನಿರ್ವಹಿಸುವದರ ಮೂಲಕ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಬೆಳೆ ಕಟಾವು ಪ್ರಯೋಗವು ಬೆಳೆ ವಿಮೆಗೆ ಸಂಬಂಧಿಸಿದ್ದಾಗಿದ್ದು ಈ ಗಂಭೀರವಾದ ವಿಷಯದಲ್ಲಿ ಉದಾಸೀನತೆ, ವಿಳಂಭ ಧೋರಣೆ ತೋರುವದರ ಮೂಲಕ ಸಮಸ್ಯೆಗಳು ತಲೆದೊರಿದಲ್ಲಿ ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಾಗುವದು ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಎ.ಕಂಬಾಳಿಮಠ ಮಾತನಾಡಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ೩೬೫, ಪಟ್ಟಣ ಪ್ರದೇಶಗಳಲ್ಲಿ ೧೯ ಒಟ್ಟು ೩೮೪ ನೋಂದಣಿ, ಉಪನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನೇವರಿ-೨೦೨೩ ರಿಂದ ೨೦೨೩ ಜುಲೈ ೧೦ ರವರೆಗೆ ಗ್ರಾಮೀಣ ಪ್ರದೇಶದಲ್ಲಿ ೯೯೪ ಹಾಗೂ ಪಟ್ಟಣ ಪ್ರದೇಶಗಳಲ್ಲಿ ೭೨೨೭ ಒಟ್ಟು ೮೨೨೧ ಜನನ ನೊಂದಣಿಗಳಾಗಿದ್ದು ಇದರಲ್ಲಿ ೬೫೬೨ ನೋಂದಣಿಗಳು ಕಾಲಮಿತಿಯೊಳಗಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಶೇ.೪೫.೧೭ ರಷ್ಟು, ಪಟ್ಟಣ ಪ್ರದೇಶದಲ್ಲಿ ಶೇ.೮೪.೫೦ ರಷ್ಟು ಒಟ್ಟಾರೆ ಜಿಲ್ಲೆಯಲ್ಲಿ ಶೇ.೭೯.೮೨ ರಷ್ಟು ನೋಂದಣಿ ಕಾರ್ಯವು ಕಾಲಮಿತಿಯೊಳಗೆ ಮಾಡಲಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ, ಜಿಲ್ಲಾ ನೋಂದಣಿ ಅಧಿಕಾರಿ ಮಹಾಂತೇಶ ಪಟಗಾರ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಮ್.ಗೊಜನೂರ ಸೇರಿದಂತೆ ಸೇರಿದಂತೆ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು.


Leave a Reply