ಕೊಪ್ಪಳ ಜನವರಿ ೨೧ : ಸಮಾಜದಲ್ಲಿ ಮನೆಮಾಡಿದ್ದ ಅನಿಷ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದ ಶರಣರು ಅಂಬಿಗರ ಚೌಡಯ್ಯನವರು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜನವರಿ ೨೧ ರಂದು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯವು ಸಮಾಜಕ್ಕೆ ಒಂದು ಅಭೂತಪೂರ್ವವಾದ ಕೊಡುಗೆಯಾಗಿದೆ. ೧೨ನೇ ಶತಮಾನವು ಕ್ರಾಂತಿಯ ಯುಗವಾಗಿದ್ದು, ಇಂದಿಗೂ ಸಮಾಜದಲ್ಲಿ ಅದರ ಆದರ್ಶವನ್ನು ಬಿಂಬಿಸುವಂತಹ ಕಲ್ಯಾಣ ಕ್ರಾಂತಿಯಾಗಿದೆ. ಬಸವಣ್ಣನವರು ಹಾಗೂ ಇತರ ಶರಣರೆಲ್ಲರೂ ಸೇರಿ ಅಂದು ಸಮಾನತೆಯನ್ನು ಸಾರಿ ಅದರ ಬೀಜವನ್ನು ಬಿತ್ತಿದರು. ಜಾತಿ, ವರ್ಣ, ಕುಲಗಳು ಯಾವುದು ಮುಖ್ಯವಲ್ಲ, ಬದಲಿಗೆ ವ್ಯಕ್ತಿ ಮುಖ್ಯವಾಗಿದ್ದಾನೆ ಎನ್ನುವುದನ್ನು ೧೨ನೇ ಶತಮಾನದಲ್ಲಿ ಅನೇಕ ಶರಣರು ತಮ್ಮ ವಚನಗಳು ಹಾಗೂ ತಮ್ಮ ಬದುಕಿನ ಮೂಲಕ ಸಾರಿದರು. ಅಂತಹ ವಚನಕಾರರಲ್ಲಿ ನ್ಯಾಯ, ನಿಷ್ಠುರಿಯಾದಂತಹ, ಧಿಟ್ಟ ನಿಲುವನ್ನು ಹೋಂದಿದಂತಹ ಶರಣರು ಅಂಬಿಗರ ಚೌಡಯ್ಯನವರು. ಸಮಾಜದ ಅಂಕು-ಡೊಂಕುಗಳನ್ನು, ಅನಿಷ್ಠಗಳನ್ನ, ಮೂರ್ತಿ ಪೂಜೆ, ಜಾತಿ ಬೇಧವನ್ನು ಖಂಡಿಸಿದ ಬಸವಣ್ಣನವರ ವಿಚಾರಗಳನ್ನು ತಮ್ಮ ವಚನಗಳ ಮೂಲಕ ನೇರ, ನಿಷ್ಠುರವಾಗಿ ತಿಳಿಸಿದವರು ಚೌಡಯ್ಯನವರು. ಶರಣರು ಯಾವ ರೀತಿಯಲ್ಲಿ ಸಮಾಜ ತಿದ್ದುವಂತಹ ಕೆಲಸ ಮಾಡಿದ್ದಾರೆಯೋ, ಆ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಈ ನಿಟ್ಟಿನಲ್ಲಿ ಶರಣರ ವಚನಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು ಜೊತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಗದಗ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಹೇಮಂತ ದಳವಾಯಿ ಅವರು ಶ್ರೀ ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ, ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬಹುದಾದ ಸರಳ ಪದಗಳಿಂದ ವಚನಗಳನ್ನು ರಚಿಸಿ, ದೇವವಾಣಿಯನ್ನು ಜನವಾಣಿಯನ್ನಾಗಿಸಿದ್ದು, ಶರಣರ ಸಾಹಿತ್ಯದಿಂದ. ೧೨ ನೇ ಶತಮಾನವು ಶರಣ ಸಾಹಿತ್ಯದ ಶತಮಾನವಾಗಿದೆ. ಮನುಕುಲದ ಕಲ್ಯಾಣಕ್ಕಾಗಿ ದುಡಿಯುವವರೇ ಮಹಾತ್ಮರು. ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು ಎಂದು ಸಾರಿ, ಸಮಾಜದ ಅಂಕು ಡೊಂಕುಗಳನ್ನು ವಚನಗಳಿಂದ ಜಾಗೃತಿ ಮೂಡಿಸಿದವರು ಅಂಬಿಗರ ಚೌಡಯ್ಯನವರು. ವಚನಗಳ ಮೂಲಕ ಸಮಾಜದ ಲೋಪದೋಷಗಳ ಕುರಿತು ತೀಕ್ಷ್ಣ ಮಾತುಗಳ ಮೂಲಕ ಜನಜಾಗೃತಿ ಮೂಡಿಸಲು ಶ್ರಮಿಸಿದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಯಮನಪ್ಪ ಕಬ್ಬೇರ, ಸೋಮಣ್ಣ ಬಾರಕೇರ, ಶಂಕರಗೌಡ ಮಾಲಿಪಾಟೀಲ್, ಯಂಕಪ್ಪ ಬಾರಕೇರ, ರಮೇಶ ಕಬ್ಬೇರ, ಹುಲಗಪ್ಪ ಬಾರಕೇರ, ರಾಜು ಕಲೆಗಾರ, ಗಂಗಾಧರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯರಾದ ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಜಯಂತಿ ಅಂಗವಾಗಿ ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಯನ್ನು ಹೆಚ್ಚು ಆಕರ್ಷಕಗೊಳಿಸಿದವು.
Gadi Kannadiga > State > ಅನಿಷ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದ ಅಂಬಿಗರ ಚೌಡಯ್ಯನವರು: ಸಾವಿತ್ರಿ ಬಿ.ಕಡಿ
ಅನಿಷ್ಟ ಸಂಪ್ರದಾಯಗಳನ್ನು ನಿಷ್ಠುರವಾಗಿ ಟೀಕಿಸಿದ ಅಂಬಿಗರ ಚೌಡಯ್ಯನವರು: ಸಾವಿತ್ರಿ ಬಿ.ಕಡಿ
Suresh21/01/2023
posted on
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023