This is the title of the web page
This is the title of the web page

Please assign a menu to the primary menu location under menu

Local News

ಶಿಕ್ಷಕರ ಮತ್ತು ವಿಶ್ವವಿದ್ಯಾಲಯಗಳ ಸಮಸ್ಯೆ ನಿವಾರಣೆಗೆ ಅದತ್ಯೆ ನೀಡಿ: ಅರುಣ ಶಹಾಪುರ ಒತ್ತಾಯ


ಬೆಳಗಾವಿ: ಬೆಳಗಾವಿಯಲ್ಲಿ ಕರ್ನಾಟಕದ ಸರ್ಕಾರದ ಚಳಿಗಾಲ ಅಧಿವೇಶನ ಇದೇ ೧೯ ಡಿಸೆಂಬರ್ ೨೦೨೨ರಿಂದ ನಡೆಯಲಿದ್ದು, ಆ ಸಂದರ್ಭದಲ್ಲಿ ಶಿಕ್ಷಕರ, ಶಾಲಾ-ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ -೨೦೨೦ ಜಾರಿಗೊಳಿಸುವಲ್ಲಿ ಪ್ರಥಮ ರಾಜ್ಯ ಎಂದು ಕರ್ನಾಟಕ ಹೆಗ್ಗಳಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸನ್ಮಾನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವಥ ನಾರಾಯಣ ಮತ್ತು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ ಅವರು ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ಹಲವಾರು ಶಿಕ್ಷಕರ ಬೇಡಿಕೆಗಳು ನೌಕರರ ಬೇಡಿಕೆಗಳನ್ನು ಈಡೇರಿಸುವ ಅಪೇಕ್ಷೆಗಳನ್ನು ಸರ್ಕಾರದ ಮೇಲೆ ಇಟ್ಟು ಕೊಂಡಿದ್ದೆವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಈಡೇರಿಸುವತ್ತ ಕ್ರಮ ಕೈಗೊಳ್ಳಬೇಕು. ಖಾಸಗಿ ಅನುದಾನಿತ ವ್ಯವಸ್ಥೆಯಲ್ಲಿರುವ ಶಿಕ್ಷಕರಿಗೆ ಹಳೆಯ ಮತ್ತು ಹೊಸ ಎರಡು ಪಿಂಚಣಿ ವ್ಯವಸ್ಥೆ ಇರದೇ ಇರುವಂತಹದು, ಸರ್ಕಾರದ ಗಮನಕ್ಕಿದ್ದು, ಅವರಿಗೂ ನಿಶ್ಚಿತ ಪಿಂಚಣಿ ವ್ಯವಸ್ಥೆ ಒದಗಿಸುವ ಕುರಿತು ಸರ್ಕಾರ ಕ್ರಮವಹಿಸಬೇಕು. ಕಾಲ್ಪನಿಕ ವೇತನ ಬಡ್ತಿ ಕುರಿತು ಹಲವು ವರ್ಷಗಳಿಂದ ಚರ್ಚೆಗಳೆ ನಡೆಯುತ್ತಿದ್ದು, ಬೆಳಗಾವಿಯ ಈ ಅಧೀವೇಶನದಲ್ಲಾದರೂ ಚರ್ಚೆಯ ಮೂಲಕ ಪರಿಹಾರ ದೊರಕಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತೇನೆ.
ಅನುದಾನಿತ ಶಿಕ್ಷಣ ವ್ಯವಸ್ಥೆಯಲ್ಲಿ ಖಾಲಿ ಹುದೆಗಳ ಭರ್ತಿ, ೧೯೯೫ರ ನಂತರ ಆರಂಭವಾಗಿರುವ ಶಾಲಾ ಕಾಲೇಜುಗಳಿಗೆ ಅನುದಾನಕೊಳಪಡಿಸುವ ಕುರಿತು ಹಾಗೂ ೮೭-೯೫ರ ಮಧ್ಯ ಆರಂಭಗೊಂಡಿರುವ ಪದವಿ ಕಾಲೇಜುಗಳ ಅನುದಾನಕೊಳಪಡಿಸುವ ಕುರಿತು, ಐಟಿಐ ಕಾಲೇಜುಗಳ ಅನುದಾನಕ್ಕೆ ಒಳಪಡಿಸುವ ಕುರಿತು ಹಾಗೂ ಗಡಿ ಜಿಲ್ಲೆಗಳ ಸರ್ಕಾರಿ ಶಾಲಾ ಕಾಲೇಜುಗಳ ಪರಿಸ್ಥಿತಿ ಸುಧಾರಣೆ ಕುರಿತು ಹಾಗೂ ಭಾಷಿಕ ಅಲ್ಪಸಂಖ್ಯಾತ ಶಾಲಾ-ಕಾಲೇಜುಗಳ ಹುದ್ದೆ ಭರ್ತಿ ಕುರಿತು, ವಿಭಜನೆಗೊಂಡ ಪದವಿಪೂರ್ವ ಕಾಲೇಜುಗಳ ಖಾಲಿ ಹುದ್ದೆಗಳ ಭರ್ತಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹುದ್ದೆ ಭರ್ತಿ ಕುರಿತು ಮತ್ತು ಪರಿಹಾರದ ದೃಷ್ಟಿಯಲ್ಲಿ ಈ ಸದನದಲ್ಲಿ ಚರ್ಚೆ ಮಾಡಬೇಕೆಂದು ವಿಧಾನ ಪರಿಷತ್‌ನ ಶಿಕ್ಷಕ ಹಾಗೂ ಪದವಿಧರ ಮತಕ್ಷೇತ್ರದ ೧೪ ಜನ ಶಾಸಕರಿಗೆ ವಿನಂತಿಸಿಕೊಳ್ಳುತ್ತೇನೆ. ಈ ಎಲ್ಲ ಸಮಸ್ಯೆ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ.
ಉನ್ನತ ಶಿಕ್ಷಣದಲ್ಲಿ ಕೂಡಾ ವಿಶ್ವವಿದ್ಯಾಲಯಗಳ ಖಾಲಿ ಹುದ್ದೆಗಳ ಭರ್ತಿ ಹೊಸ ವಿಶ್ವವಿದ್ಯಾಲಯಗಳಿಗೆ ಸಂಪೂರ್ಣ ಅಗತ್ಯ ಹುದ್ದೆಗಳ ಸೃಷ್ಟಿ ಮತ್ತು ಭರ್ತಿಗಾಗಿ ಶೀಘ್ರ ಕ್ರಮ ವಹಿಸಬೇಕಾಗಿದೆ. ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಸೂಕ್ತ ಕ್ರಮ ವಹಿಸಬೇಕಾಗಿ ಆಗ್ರಹಿಸುತ್ತೇನೆ. ಎಲ್ಲ ವಿಶ್ವವಿದ್ಯಾಲಯಗಳ ಮೂಲ ಸೌಕರ್ಯಗಳ ತೀವ್ರ ಅಗತ್ಯವಿದ್ದು ಮತ್ತು ಅನುದಾನ ಅಗತ್ಯತೆಯಿದೆ. ಅವುಗಳ ಸೌಕರ್ಯ ವೃದ್ಧಿಗಾಗಿ ಹೆಚ್ಚಿನ ಅನುದಾನ ಕಲ್ಪಿಸಲು ಸರ್ಕಾರ ಮುಂದಾಗಬೇಕು.
ಬೆಳಗಾವಿ ಅಧಿವೇಶನ ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆಗಳ ಜೊತೆಗೆ ಉತ್ತರ ಕರ್ನಾಟಕದ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.


Leave a Reply