ಬೆಳಗಾವಿ; ದಿನ ನಿತ್ಯದ ಹತ್ತು ಹಲವು ಸಮಸ್ಯೆಗಳಿಂದ ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುವ ಸಾಹಿತ್ಯವೇ ಅದು ಚುಟುಕು ಸಾಹಿತ್ಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಡಾ. ಎಂ.ಜಿ.ಆರ್.ಅರಸ್ ಅವರು ಹೇಳಿದರು.
ಅವರಿಂದು ಬೆಳಗಾವಿಯಲ್ಲಿ
ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ರಜತ ಮಹೋತ್ಸವ , ಡಾ.ಎಂ. ಅಕ್ಬರ್ ಅಲಿ ಅವರ ಜನ್ಮ ಶತಮಾನೋತ್ಸವ ಹಾಗೂ ಜಿಲ್ಲಾ ನಾಲ್ಕನೆಯ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮನುಕುಲದ ಆದಿ ಕಾವ್ಯವೇ ಚುಟುಕು ಸಾಹಿತ್ಯ ಎಂದು ಬಣ್ಣಿಸಿದ ಅವರು ಸುಖ-ದುಃಖ ಸಾಮಾಜಿಕ ಸರಿ ತಪ್ಪುಗಳ ಸಂದೇಶ ನೀಡುವ ತಲ್ಲಣಿಸುವ ಮನಕ್ಕೆ ಹಸಿರು ನೀಡುವ ಸಾಹಿತ್ಯವೇ ಚುಟುಕು ಸಾಹಿತ್ಯ ಎಂದು ಹೇಳಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಎಂ ಅಕ್ಬರ್ ಅಲಿ ಅವರು ಕನ್ನಡ ಮಾತೃ ಭಾಷೆ ಅಲ್ಲದಿದ್ದರೂ ಕನ್ನಡದಲ್ಲಿ ಸರ್ವಜ್ಞನ ಕುರಿತು ಸಂಶೋಧನೆ ನಡೆಸಿದ ಕಾರ್ಯ ಅಭಿನಂದನೀಯ ಎಂದರು.
ಬೆಳಗಾವಿ ಕಾರಂಜಿ ಮಠದ ಶ್ರೀ.ಗುರುಸಿದ್ಧ ಮಹಾಸ್ವಾಮಿಜಿಯವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಪತ್ರಿಕೆಯ ಮೂಲೆಯೊಂದರಲ್ಲಿ ಪ್ರಕಟವಾಗುತ್ತಿದ್ದ ಚುಟುಕುಗಳು ಅರ್ಥಪೂರ್ಣವಾದ ಸಂದೇಶ ನೀಡುವ ಸಾಹಿತ್ಯ, ಹಾಸ್ಯ ಪ್ರೇಮ ರಾಜಕಾರಣ ಸಮಾಜಕಾರಣ ವಿಡಂಬಣೆ ಹೀಗೆ ಎಲ್ಲ ವಿಷಯಗಳ ಕುರಿತು ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಸಂದೇಶ ನೀಡುವ ಸಾಹಿತ್ಯವೇ ಚುಟುಕು ಸಾಹಿತ್ಯ ಎಂದರು.
ಕಾಸರಗೋಡು ಚುಸಾಪ ಅಧ್ಯಕ್ಷ ಶಿವರಾಮ ಕಾಸರಗೋಡು ಮಾತನಾಡಿ ಮಾರ್ಚ್ 27ರಂದು ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸರ್ವರನ್ನು ಆಹ್ವಾನಿಸಿದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿ ಎನ್ ಜೋಶಿ ಅವರು ಚುಟುಕು ಪಾರಿಜಾತ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
.ಸಮಾಜ ಸೇವಕ ಬಾಸುರು ತಿಪ್ಪೇಸ್ವಾಮಿ ಅವರು ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಅಪ್ಪಾಸಾಹೇಬ್ ಅಲಿಬಾದಿ, ಡಾ.ಎಚ್.ಐ. ತಿಮ್ಮಾಪುರ್, ಡಾ.ಬಸವರಾಜ್ ಜಗಜಂಪಿ, ದಾವಣಗೆರೆ ಚುಸಾಪ ಅಧ್ಯಕ್ಷ ರಾಜಶೇಖರ ಜೆ.ಎಚ್. ಹಾಗೂ ರಾಮನಗರದ ಪೂರ್ಣಚಂದ್ರ , ಮೈಸೂರಿನ ರತ್ನಹಾಲಪ್ಪಗೌಡ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಚುಸಾಪ ಕಾರ್ಯದರ್ಶಿ ಬಸವರಾಜ್ ಗಾರ್ಗಿ ಅತಿಥಿಗಳ ಪರಿಚಯ ಮಾಡಿದರು. ಚುಸಾಪ ಜಿಲ್ಲಾಧ್ಯಕ್ಷ ಎಲ್.ಎಸ್.ಶಾಸ್ತ್ರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ.ಸಿ.ಕೆ.ಜೋರಾಪೂರ ಸ್ವಾಗತಿಸಿದರು. ಗ್ರಂಥ ಗೌರವ ಸಮರ್ಪಣೆ ಆನಂದ್ ಪುರಾಣಿಕ ಮತ್ತು ಚಂದ್ರಶೇಖರ್ ನವಲಗುಂದ ನೆರವೇರಿಸಿದರು. ನೆನಪಿನ ಕಾಣಿಕೆಗಳನ್ನು ಅನ್ನಪೂರ್ಣಾ ಹಿರೇಮಠ ಮತ್ತು ಅನ್ನಪೂರ್ಣಾ ಮಳಗಲಿ ವಿತರಿಸಿದರು. ಎಂ.ಎ. ಪಾಟೀಲ ಮತ್ತು ಸುನಂದಾ ಮುಳೆ ವೇದಿಕೆ ಕಾರ್ಯಕ್ರಮ ನಿರ್ವಹಿಸಿದರೆ ಅಶೋಕ್ ಮಳಗಲಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ದೀಪಿಕಾ ಚಾಟೆ ಅವರು ವಂದಿಸಿದರು.