ಬೆಳಗಾವಿ: ಅಕ್ಟೊಬರ್-೦೮: “ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಹಾಗೆ ನೋಡಿದರೆ ಜಾನಪದ ಸಾಹಿತ್ಯದಲ್ಲಿ ಪ್ರಮುಖವಾಗಿ ಅನಕ್ಷರಸ್ಥ ಮಹಿಳೆಯರ ಮೌಖಿಕ ಸಾಹಿತ್ಯ ಎದ್ದು ಕಾಣುತ್ತದೆ. ಆ ನಿಟ್ಟಿನಲ್ಲಿ ಲೇಖನ, ಕತೆ, ಕವನ, ಚುಟುಕು ಸಾಹಿತ್ಯ ಹೀಗೆ ವಿವಿಧ ಪ್ರಕಾರದ ಗಟ್ಟಿ ಸಾಹಿತ್ಯ ಬರೆಯುವ ಮೂಲಕ ಸುನಂದಾ ಎಮ್ಮಿ ಅವರು ಆಧುನಿಕ ಮಹಿಳಾ ಸಾಹಿತ್ಯ ಲೋಕಕ್ಕೆ ಭರವಸೆ ಹುಟ್ಟಿಸುವ ಸಾಹಿತಿಯಾಗಿ ಹೊರಹೊಮ್ಮಿದ್ದಾರೆ” ಎಂದು ಕನ್ನಡದ ಹಿರಿಯ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ ಅಭಿಪ್ರಾಯ ಪಟ್ಟರು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಲೇಖಕಿ ಸುನಂದಾ ಎಮ್ಮಿ ಅವರ ‘ಎಂಟು ಕೃತಿಗಳ ಲೋಕಾರ್ಪಣೆ ‘ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಿತ್ತೂರು ಸಂಸ್ಥಾನ ಅರಮನೆ-ಗುರುಮನೆ ಕೃತಿ ಪರಿಚಯ ಮಾಡಿ ಮಾತನಾಡಿದ ಅವರು, “ಒಂದು ಸಂಸ್ಥಾನದ ಕುರಿತು ಬರೆಯುವುದಕ್ಕೆ ಸಂಶೋಧನಾತ್ಮಕ ಮನೋಭಾವವಿರಬೇಕು. ಆ ನಿಟ್ಟಿನಲ್ಲಿ ಯಾರೂ ಗಮನಿಸದ ಕಿತ್ತೂರು ನಾಡಿನ ಅನೇಕ ವಿಚಾರಗಳನ್ನು ದಾಖಲಿಸಿರುವುದು ಗಮನಾರ್ಹ ಸಂಗತಿ. ಒಬ್ಬ ಗೃಹಿಣಿಯಾಗಿ ವಿವಿಧ ಪ್ರಕಾರದ ೨೮ ಕೃತಿ ರಚಿಸುವುದು ಸುಲಭ ಸಾಧ್ಯವಲ್ಲ. ಹೀಗಾಗಿ ಸುನಂದಾ ಅವರ ಸಾಹಿತ್ಯಾಸಾಕ್ತಿ ಹಾಗೂ ಸಾಹಿತ್ಯ ಸೃಷ್ಟಿ ಅಪ್ರತಿಮ ಸಾಧನೆಯಾಗಿದೆ. ಅವರಿಂದ ಮತ್ತಷ್ಟು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಬರುವಂತಾಗಲಿ” ಎಂದು ಹೇಳಿದರು.
ಪದ್ಮಾವತಿ-ಒಂದು ವಿಸ್ಮಯ ಹಾಗೂ ಪಾವನಿ ಮತ್ತು ಇತರ ಕತೆಗಳು ಕುರಿತು ಕೃತಿ ಕುರಿತು ಲಿಂಗರಾಜ ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ರೇಣುಕಾ ಕಠಾರಿ, ಸಾರೋಟು-ಕವನ ಸಂಕಲನ, ಕರೋನ ಚುಟುಕುಗಳು ಹಾಗೂ ನುಡಿ ತೋರಣ ಕೃತಿಗಳ ಕುರಿತು ಹಿರಿಯ ಸಾಹಿತಿ ಡಾ. ಪಿ. ಜಿ. ಕೆಂಪಣ್ಣವರ, ಲೇಖನ ಸಂಗ್ರಹಗಳಾದ ಶರಣ ಪ್ರಣತಿ ಹಾಗೂ ಶರಣ ಸಂಪ್ರೀತಿ ಕುರಿತು ಪ್ರೊ. ಶ್ರೀಶೈಲ ಮಠಪತಿ ಮಾತನಾಡಿದರು.
ಸಾನಿಧ್ಯ ವಹಿಸಿದ್ದ ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ, ” ಕಿತ್ತೂರು ಕರ್ನಾಟಕ ಭಾಗದಲ್ಲಿ ಇತಿಹಾಸದಲ್ಲಿ ಚೆನ್ನಮ್ಮ, ಮಲ್ಲಮ್ಮನವರ ಹೆಸರಿದ್ದಂತೆ ಸಾಹಿತ್ಯ ಲೋಕದಲ್ಲೂ ಈ ಭಾಗದ ಮಹಿಳೆಯರು ಹೆಸರು ಮಾಡುತ್ತಿರುವುದು ಶ್ಲಾಘನೀಯವಾಗಿದ್ದು ಸುನಂದಾ ಎಮ್ಮಿ ಅವರು ಎಂಟು ಕೃತಿಗಳನ್ನು ಒಮ್ಮೆಲೆ ಸಾಹಿತ್ಯ ಲೋಕಕ್ಕೆ ನೀಡುತ್ತಿರುವುದು ದಾಖಲೆಯಾಗಿದೆ. ಸಾಹಿತ್ಯದ ಮೂಲಕ ಸ್ತ್ರೀ ಸಮಾನತೆಯನ್ನು ಜಾಗೃತಿಗೊಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಆಧುನಿಕ ಕಾಲದಲ್ಲೂ ಸ್ತ್ರೀ ಶೋಷಣೆ ನಡೆಯುತ್ತಿರುವುದು ನಾವೆಲ್ಲ ತಲೆ ತಗ್ಗಿಸುವಂತಾಗಿದೆ. ಆ ನಿಟ್ಟಿನಲ್ಲಿ ಹನ್ನೆರಡನೇ ಶತಮಾನದ ಬಸವಾದಿ ಶರಣರ ಜಾಗೃತಿ ಸಂದೇಶದ ರಥವನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಪ್ರಜ್ಞಾವಂತರ ಮೇಲಿದೆ” ಎಂದು ನುಡಿದರು.
ಲೇಖಕಿಯರಾದ ಶ್ರೀಮತಿ ಶೈಲಜಾ ಬಿಂಗೆ ಹಾಗೂ ಶ್ರೀಮತಿ ರತ್ನಾಪ್ರಭಾ ಬೆಲ್ಲದ ಅವರನ್ನು ಎಮ್ಮಿ ಕುಟುಂಬದ ಪರವಾಗಿ ಸತ್ಕಾರಿಸಲಾಯಿತು. ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಂದ ಲೇಖಕಿ ಎಮ್ಮಿ ದಂಪತಿಗಳನ್ನು ಸತ್ಕಾರಿಸಲಾಯಿತು.
ಹಿರಿಯ ಸಾಹಿತಿಗಳಾದಡಾ. ಜಿನದತ್ತ ದೇಸಾಯಿ, ಎಂ. ಎಸ್. ಇಂಚಲ, ಡಾ. ರಾಮಕೃಷ್ಣ ಮರಾಟೆ, ಡಾ. ಬಸವರಾಜ ಜಗಜಂಪಿ, ಯ. ರು. ಪಾಟೀಲ, ನೀಲಗಂಗಾ ಚರಂತಿಮಠ, ಹಮಿದಾ ದೇಸಾಯಿ, ಎ. ಎ. ಸನದಿ, ಸ. ರಾ. ಸುಳಕುಡೆ, ಯುವ ಸಾಹಿತಿ ನದಿಮ ಸನದಿ, ಶಂಕರ ಬಾಗೇವಾಡಿ, ಸುರೇಶ ಹಂಜಿ, ಎಂ. ವೈ. ಮೆಣಸಿನಕಾಯಿ, ವಿಶ್ರಾಂತ ತಹಶೀಲ್ದಾರ ನಾಗೇಶ ಎಮ್ಮಿ, ಪ್ರಸಾದ ಎಮ್ಮಿ, ಮನೋಹರ ಮಜಲಟ್ಟಿ, ಜ್ಯೋತಿ ಬಾದಾಮಿ, ಜಯಶ್ರೀ ನಿರಾಕರೆ, ಡಾ. ಮೈತ್ರೆಯನಿ ಗದಿಗೆಪ್ಪಗೌಡರ, ವಾಸಂತಿ ಮೇಳೇದ, ಜಯಶೀಲಾ ಬ್ಯಾಕೋಡ ಮುಂತಾದವರು ಉಪಸ್ಥಿತರಿದ್ದರು.
ನಯನಾ ಗಿರಿಗೌಡರ ಅವರ ವಚನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಲೇಖಕಿ ಸುನಂದಾ ಎಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಮಳಗಲಿ ಸ್ವಾಗತಿಸಿದರು. ಎಂ.ಎನ್.ಆರ್.ಎಸ್. ಶಿಕ್ಷಣ ಸಂಸ್ಥೆಯ ಬಿ. ಎಡ್. ಕಾಲೇಜಿನ ಪ್ರಿನ್ಸಿಪಾಲ್
ಡಾ. ನಿರ್ಮಲಾ ಬಟ್ಟಲ ನಿರ್ವಹಿಸಿದರು. ಡಾ. ರಾಜನಂದಾ ಗಾರ್ಗಿ ವಂದಿಸಿದರು.
Gadi Kannadiga > Local News > “ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಅಪಾರ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023