ಕೊಪ್ಪಳ, ನವೆಂಬರ್ ೧೫ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಎನ್.ಸಿ.ಡಿ. ಕೋಶ ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ನಗರದ ಹಳೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ “ವಿಶ್ವ ಮಧುಮೇಹ(ಸಕ್ಕರೆ ಕಾಯಿಲೆ)” ದಿನಾಚರಣೆ ಅಂಗವಾಗಿ “ಶಿಕ್ಷಣದಿಂದ ಭವಿಷ್ಯದ ರಕ್ಷಣೆ” ಎಂಬ ಘೋಷವಾಕ್ಯದೊಂದಿಗೆ ಸಮುದಾಯದಲ್ಲಿ ಅರಿವು ಮೂಡಿಸುವ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಡಾ.ಅಲಕನಂದಾ ಮಳಗಿ ಅವರು, ಪ್ರತಿ ವರ್ಷ ನವ್ಹೆಂಬರ್ ೧೪ ರಂದು “ವಿಶ್ವ ಮಧುಮೇಹ(ಸಕ್ಕರೆ ಕಾಯಿಲೆ)” ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಇದರ ಉದ್ದೇಶ ಸಕ್ಕರೆ ಖಾಯಿಲೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಖಾಯಿಲೆ ಹೇಗೆ ಬರುತ್ತದೆ, ಅದರ ಲಕ್ಷಣಗಳೇನು, ಯಾವ ರೀತಿ ಮುಂಜಾಗ್ರತೆ ತೆಗೆದುಕೊಳ್ಳಬೇಕು ಮತ್ತು ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಾಗಿದೆ. ಜೀವನ ಶೈಲಿಯಿಂದ ಬರುವ ರೋಗಗಳಲ್ಲಿ ಸಕ್ಕರೆ ಖಾಯಿಲೆ ಕೂಡ ಒಂದಾಗಿದೆ. ಸಕ್ಕರೆ ಕಾಯಿಲೆ ಬಗ್ಗೆ ನಿರ್ಲಕ್ಷ ಬೇಡ. ಇದು ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹಾಗೂ ಮಕ್ಕಳಲ್ಲಿಯೂ ಕೂಡ ಕಂಡು ಬರುತ್ತದೆ. ರೋಗಬಂದ ಮೇಲೆ ಕಷ್ಟ ಅನುಭವಿಸುವುದಕ್ಕಿಂತ ಬರದ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯ. ಮುಂಜಾಗ್ರತೆಯಾಗಿ ೩೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದಷ್ಟು ಬೇಗ ಗುರುತಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಆಹಾರದಲ್ಲಿ ಸಿಹಿ ಪದಾರ್ಥ ಕಡಿಮೆ ಸೇವನೆ, ದಿನನಿತ್ಯ ದೈಹಿಕ ಚಟುವಟಿಕೆಯಿಂದ ಇರಬೇಕು. ನಿಯಮಿತ ವ್ಯಾಯಾಮ ಮತ್ತು ಯೋಗ ಹಾಗೂ ಧ್ಯಾನ ಮಾಡಬೇಕು. ನಮ್ಮ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಸಾರ್ವಜನಿಕರಿಗೆ ಈ ಬಗ್ಗೆ ತಿಳಿಸಬೇಕೆಂದು ಸಿಬ್ಬಂದಿಗಳಿಗೆ ತಿಳಿಸಿದರು.
ಐ.ಇ.ಸಿ. ವಾಹನದ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮವು ಕೇಂದ್ರ ಬಸ್ ನಿಲ್ದಾಣ, ಕಾರ್ಮಿಕರ ವೃತ್ತ, ಡಾ.ಸಿಂಪಿ ಲಿಂಗಣ್ಣ ರಸ್ತೆ, ಅಜಾದ್ವೃತ್ತ, ಅಶೋಕವೃತ್ತ ಮಾರ್ಗವಾಗಿ ಮಧುಮೇಹಕ್ಕೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತ ಮತ್ತು ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ಅರಿವು ಮೂಡಿಸುತ್ತ ಮರಳಿ ಹಳೆ ಜಿಲ್ಲಾ ಆಸ್ಪತ್ರೆಯ ಆವರಣದವರೆಗೆ ತಲುಪಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಪ್ರಕಾಶ, ತಾಲೂಕಾ ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ, ಡಾ. ಮಹೇಶ ಉಮಚಿಗಿ, ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮ ಸಂಯೋಜಕರಾದ ಬಸಪ್ಪ ಸವಟಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಹಾಗೂ ವಿವಿಧ ವೃಂದದ ಅಧಿಕಾರಿ/ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಭಾಗವಹಿಸಿದ್ದರು.
ವಿಶ್ವ ಮಧುಮೇಹ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ತಾಲೂಕಾ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರ – ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಆಚರಿಸಿ ಇದರ ಪ್ರಯುಕ್ತ ಜನಸಮುದಾಯಕ್ಕೆ ಎನ್.ಸಿ.ಡಿ. ಸ್ಕ್ರೀನಿಂಗ್ ಕ್ಯಾಂಪ್ಗಳನ್ನು ಹಮ್ಮಿಕೊಳ್ಳಲಾಯಿತು.
Gadi Kannadiga > State > ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಡಿಎಚ್ಒ ಚಾಲನೆ