ಕೊಪ್ಪಳ ಜೂನ್ ೨೮ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಕೊಪ್ಪಳ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜೂನ್ ೨೭ರಂದು ಕೊಪ್ಪಳದ ವಿಕಲಚೇತನ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಾಜಿ ದೇವದಾಸಿ ಮಹಿಳೆಯರಿಗೆ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜಯಶ್ರೀ ಅವರು ಕಾರ್ಯಕ್ರಮದ ಉದ್ಘಾಟಿಸಿದರು. ಬಳಿಕ ಮಾತನಾಡಿ, ಗ್ರಾಮ ಮಟ್ಟದಲ್ಲಿ ಎಲ್ಲಾ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸರ್ಕಾರದಿಂದ ಇರುವ ಸೌಲಭ್ಯಗಳ ಸೌಕರ್ಯವನ್ನು ಅಂಗನವಾಡಿ ಕೇಂದ್ರದ ಮೂಲಕ ಮಾಹಿತಿ ನೀಡುವುದರ ಜೊತೆಗೆ ಸೌಲಭ್ಯ ಒದಗಿಸಲಾಗುತ್ತದೆ. ಹುಲಿಗೆಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ಆದರೆ ದೇವದಾಸಿ ಮೂಢಾಚಾರಕ್ಕೆ ಹೋಗಬೇಡಿ ಮತ್ತು ಮಕ್ಕಳೊಂದಿಗೆ ಬಿಕ್ಷಾಟನೆ ಮಾಡುವುದು ಸಹ ಕಾನೂನು ಅಪರಾಧವಾಗಿದ್ದು, ಯಾರು ಇಂತಹ ಅಪರಾದಗಳನ್ನು ಮಾಡಬಾರದು ಎಂದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕೊಪ್ಪಳ ದೇವದಾಸಿ ಪುನರ್ ವಸತಿ ಯೋಜನೆ ಯೋಜನಾಧಿಕಾರಿಗಳಾದ ಪೂರ್ಣಿಮಾ ಯೋಳಬಾವಿ ಅವರು ಮಾತನಾಡಿ, ಮಾಜಿ ದೇವದಾಸಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರದಿಂದ ನೀಡುತ್ತಿದ್ದು, ಅವುಗಳಲ್ಲಿ ನಿವೇಶನ ಹೊಂದಿದ ವಸತಿರಹಿತ ಮಹಿಳೆಯರಿಗೆ ಶೀಘ್ರದಲ್ಲಿಯೇ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು. ೪೫ ವರ್ಷ ಮೇಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ಅಲ್ಲದೆ ಪ್ರತಿ ತಿಂಗಳು ರೂ. ೧೫೦೦ ಮಾಶಾಸನ ನೀಡಲಾಗುತ್ತಿದೆ. ಅಲ್ಲದೇ ಆದಾಯ ಉತ್ಪನ್ನ ಚಟುವಟಿಕೆಗಾಗಿ ನಿಗಮದಿಂದ ಸಾಲ ಮತ್ತು ಸಹಾಯ ಧನವನ್ನು ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಖಿ ಘಟಕದ ಆಡಳಿತಾಧಿಕಾರಿಗಳಾದ ಯಮುನಾ ಬೆಸ್ತರ್ ಅವರು ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಖಿ ಒನ್ ಸ್ಟಾಪ್ ಸೆಂಟರ್ ಸಂಕಷ್ಟಕ್ಕೆ ಒಳಗಾದ ಮಕ್ಕಳು ಮತ್ತು ಮಹಿಳೆಯರ ಶ್ವೇಯೋಭಿವೃದ್ಧಿಗಾಗಿ ೨೦೧೪ ರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ದೌರ್ಜನ್ಯಕ್ಕೆಗೊಳಗಾದ ಮಗು ಮತ್ತು ಮಹಿಳೆಯರಿಗಾಗಿ ಸಖಿ ಘಟಕದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ ಪೊಲೀಸ್ ನೆರವು ಮತ್ತು ಉಚಿತ ಕಾನೂನು ನೆರವು, ತಾತ್ಕಾಲಿಕ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗುವುದೆಂದು ಮಾಹಿತಿ ನೀಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಶಾಂತಾ ಕಟ್ಟಿಮನಿ ಅವರು ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ತಂಬಾಕು ವ್ಯಸನಿ ಮುಕ್ತ ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಶಿಬಿರದಲ್ಲಿ ಭಾಗವಹಿಸಿದ ೧೫೦ ಜನ ಶಿಬಿರಾರ್ಥಿಗಳಿಗೆ ಬಿ.ಪಿ, ಶುಗರ್ ತಪಾಸಣೆ ಮಾಡಿಲಾಯಿತು ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಮಾತ್ರೆಗಳನ್ನು ಹಾಗೂ ತಂಬಾಕು ವ್ಯಸನಿಗಳಿಗೆ ಸಮಾಲೋಚನೆ ಮಾಡುವುದರ ಮೂಲಕ ಸೂಕ್ತ ತಿಳುವಳಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ವಿನಾಯಕ, ಡಾ.ಶಿವಕುಮಾರ್ ಹಾಗೂ ಡಾ.ಜಯಶ್ರೀ, ಸಿಬ್ಬಂದಿ ಶೋಭಾ, ರೇಖಾ ಗುಬ್ಬಿ, ಜಿ.ಗಂಗಾಧರ್ ಸೇರಿದಂತೆ ಸಖಿ ಒನ್ ಸ್ಟಾಪ್ ಸೆಂಟರ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Gadi Kannadiga > State > ಮಾಜಿ ದೇವದಾಸಿ ಮಹಿಳೆಯರ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಯಶಸ್ವಿ
ಮಾಜಿ ದೇವದಾಸಿ ಮಹಿಳೆಯರ ಜಿಲ್ಲಾ ಮಟ್ಟದ ಆರೋಗ್ಯ ತಪಾಸಣೆ ಯಶಸ್ವಿ
Suresh28/06/2023
posted on
