ಬೆಳಗಾವಿ : ಶ್ರೀಮತಿ ನೀಲಗಂಗಾ ಚರಂತಿಮಠ ರಚಿಸಿರುವ “ಮುಕ್ತಾಂಗನೆ” ಅಕ್ಕಮಹಾದೇವಿ ಕುರಿತ ಮಹಾಕಾವ್ಯ ಅತ್ಯಂತ ಸರಳವಾದ ಶಬ್ದಗಳಲ್ಲಿ ಮತ್ತು ಸರಳವಾದ ಭಾಷೆಯಲ್ಲಿ ಮೂಡಿ ಬಂದ ಮಹಾಕಾವ್ಯ ಇದಾಗಿದೆ, ಮೂರು ಸಾಲಿನಲ್ಲಿ ಮೂರು ಲೋಕಗಳನ್ನು ತೆರೆದಿಡುವ ಶಕ್ತಿ ತ್ರಿಪದಿಗಳಲ್ಲಿ ಇದೆ ಎಂದು ಹಿರಿಯ ಸಾಹಿತಿ ವಿಮರ್ಶಕ ಡಾ. ಬಸವರಾಜ ಜಗಜಂಪಿ ಉಪನ್ಯಾಸ ಹೇಳಿದರು.
ಅವರು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ ಹಾಗೂ ಅಕ್ಕನ ಬಳಗಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಶಿವ ಬಸವ ನಗರದಲ್ಲಿರುವ ಎಸ್.ಜಿ. ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಸಭಾ ಗ್ರಹದಲ್ಲಿ ಅಕ್ಕಮಹಾದೇವಿ ಜಯಂತಿ “ಚಿದ್ ಬೆಳಗು” ಕಾರ್ಯಕ್ರಮದಲ್ಲಿ ಅವರು ಶ್ರೀಮತಿ ನೀಲಗಂಗಾ ಚರಂತಿಮಠ ಅವರ ಅಕ್ಕಮಹಾದೇವಿ ಕುರಿತಾದ ಕೃತಿ “ಮುಕ್ತಾಂಗನೆ” ಕುರಿತು ಮಾತನಾಡುತ್ತಿದ್ದರು.
ಮಹಾದೇವಿಯಕ್ಕನ ಕುರಿತು ನೂರಾರು ಸಾಹಿತಿಗಳಿಂದ ನೂರಾರು ಕೃತಿಗಳು ರಚಿತಗೊಂಡಿವೆ ಆದರೆ ಯಾವುದರಲ್ಲೂ ಪರಿಪೂರ್ಣವಾದ ಮಾಹಿತಿಯನ್ನು ನೀಡಲು ಸಾಧ್ಯವಾಗಲಾರದು ಏಕೆಂದರೆ ಯಾವುದೇ ಕೃತಿ ರಚನೆಯಾದರೂ ನಾಲ್ಕು ಜನ ಕುರುಡರು ಒಂದು ಆನೆಯನ್ನು ವರ್ಣಿಸಿದಂತೆ ಆಗುತ್ತದೆ ಎಂದರು, ಮಹಾಕಾವ್ಯ ಓದುತ್ತಿದ್ದರೆ ಅಲ್ಲಿ ಹೃದಯದಿಂದ ಹೃದಯಕ್ಕೆ ಮುಟ್ಟುವಂತಹ ಭಾವನೆಗಳನ್ನು ಹಂಚಿಕೊಳ್ಳಲಾಗಿದೆ, ಉಡುತಡಿಯಿಂದ ಕಲ್ಯಾಣಕ್ಕೆ ಕಲ್ಯಾಣದಿಂದ ಕದಳಿವನಕ್ಕೆ ಹೊರಡುವವರೆಗಿನ ಸಂದರ್ಭಗಳಾಗಿರಬಹುದು ಅಕ್ಕಮಹಾದೇವಿ ಪ್ರಭುದೇವರನ್ನು ಗೆಲ್ಲಲು ಪ್ರಯತ್ನಿಸುವ ಸಂದರ್ಭ ಆಗಿರಬಹುದು ಎಲ್ಲವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ, ಮಹಾಕಾವ್ಯವನ್ನು ಹಾವಿನ ಸಂಗದಲ್ಲಿ ಲೇಸನು ಕಂಡವಳ ಕಥೆ ಎಂದು ಬಣ್ಣಿಸಿದರಲ್ಲದೆ ಶ್ರೀಮತಿ ನೀಲಗಂಗಾ ಚರಂತಿಮಠ ಅವರು ಮಹಾಕಾವ್ಯ ರಚನೆಯಲ್ಲಿ ಅತ್ಯಂತ ಶ್ರಮ ವಹಿಸಿದ್ದಾರೆ ಎಂದು ನುಡಿದರು.
ಶ್ರೀಮತಿ ಜಯಶ್ರೀ ನಿರಾಕರಿ ಹಾಗೂ ಶ್ರೀಮತಿ ಜಯಶೀಲಾ ಬ್ಯಾಕೋಡ ಸಂಪಾದಕತ್ವದಲ್ಲಿ ರಚಿಸಿದ “ಧರೆಗಿಳಿದ ಶಿವಶರಣೆಯರು” ಕುರಿತು ಸಾಹಿತಿ ಡಾ.ಮೈತ್ರಾಯಿಣಿ ಗದಿಗೆಪ್ಪಗೌಡರ ಮಾತನಾಡಿ ಹೆಣ್ಣು ಮಕ್ಕಳಿಗೆ ವೇದಿಕೆಯನ್ನು ಒದಗಿಸಿದ್ದೆ 12ನೇ ಶತಮಾನದ ಬಸವ ಧರ್ಮ, ಅದೇ ಮಾರ್ಗದಲ್ಲಿ ನಡೆದ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ ಸರ್ವಧರ್ಮದವರಿಗೆ ವೇದಿಕೆಯನ್ನು ನೀಡಿದರು, ಮಠಮಾನ್ಯಗಳು ಮಾಡಿದಷ್ಟು ಅನ್ನ ಮತ್ತು ಅಕ್ಷರ ದಾಸೋಹದ ಕಾರ್ಯವನ್ನು ಜಗತ್ತಿನಲ್ಲಿ ಬೇರೆ ಯಾವ ಧಾರ್ಮಿಕ ಸಂಸ್ಥೆಗಳು ಮಾಡಲಿಲ್ಲ ಎಂದರು.
ಇತ್ತೀಚೆಗೆ ಹಾವೇರಿ ವಿಶ್ವವಿದ್ಯಾಲಯಕ್ಕೆ ನೂತನ ಕುಲಸಚಿವೆಯಾಗಿ ನೇಮಕಗೊಂಡಿರುವ ಬೆಳಗಾವಿಯ ಡಾ.ವಿಜಯಲಕ್ಷ್ಮಿ ಪುಟ್ಟಿ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮನ್ನು ಬೆಳೆಸಿದ, ವಿವಿಧ ಸಂದರ್ಭದಲ್ಲಿ ತಮಗೆ ವೇದಿಕೆ ಒದಗಿಸಿದ ನಾಗನೂರು ರುದ್ರಾಕ್ಷಿ ಮಠ ಮತ್ತು ಇಲ್ಲಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಸಹಕಾರವು ಅಮೂಲ್ಯವಾದದ್ದು, ಇಲ್ಲಿ ತಾವು ಸಲ್ಲಿಸಿದ ಸೇವೆ ತಮಗೆ ಈ ಉನ್ನತ ಹುದ್ದೆಯನ್ನು ಒದಗಿಸಿ ಕೊಟ್ಟಿದ್ದು ಅದನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸ ತಮಗಿದೆ ಎಂದರು. ಅಕ್ಕಮಹಾದೇವಿ ಕುರಿತಾದ ಎರಡು ಗೀತೆಗಳನ್ನು ಅವರು ಪ್ರಸ್ತುತಪಡಿಸಿದರು.
ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ವಹಿಸಿದ್ದರು.
ಸಾನಿಧ್ಯದಲ್ಲಿ ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿ ಅಕ್ಕನ ಬಳಗದ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರೆ ಇಲ್ಲದೆ ಮುಂದಿನ ದಿನಗಳಲ್ಲಿ ಶ್ರೀಮಠದಿಂದ ಎಲ್ಲ ರೀತಿಯ ಸಹಕಾರ ಸಹಾಯ ಇರುತ್ತದೆ ಎಂದರು.
ಇತ್ತೀಚಿಗೆ ಪಿಎಚ್ ಡಿ ಪದವಿ ಪೂರ್ಣಗೊಳಿಸಿರುವ ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಸ್ವಾಮಿಗಳಿಗೆ ಮತ್ತು ಕಾರಂಜಿ ಮಠದ ಕಿರಿಯ ಸ್ವಾಮೀಜಿ ಡಾ. ಶಿವಯೋಗಿ ದೇವರಿಗೆ ಇದೇ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ನೀಡಲಾಯಿತು, ಇಬ್ಬರೂ ಸ್ವಾಮೀಜಿಗಳು ಗೌರವ ಸನ್ಮಾನಕ್ಕೆ ಉತ್ತರವಾಗಿ ಆಶೀರ್ವಚನ ನೀಡಿದರು.
ಮುಖ್ಯ ಕಾರ್ಯಕ್ರಮ ಆರಂಭವಾಗುವ ಮುನ್ನ ಮಾರುತಿ ಬೀದಿ ಅಕ್ಕನ ಬಳಗ , ಪ್ರಭುದೇವ ಮಾತ್ರ ಮಂಡಳಿ, ಕಾರಂಜಿ ಮಠದ ಮಾತ್ರ ಮಂಡಳಿ, ಲಿಂಗಾಯಿತ ಮಹಿಳಾ ಸಮಾಜ, ಸ್ಪೂರ್ತಿ ಮಹಿಳಾ ಮಂಡಲ ಬೆಳಗಾವಿ, ಸದಸ್ಯರುಗಳಿಂದ ವಚನ ಗಾಯನ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀಮತಿ ನೈನಾ ಗಿರಿಗೌಡರ್ ನಿರ್ವಹಿಸಿದರು.
ಶ್ರೀಮತಿ ಶೈಲಜಾ ಭಿಂಗೆ ಅವರು ಪ್ರಸ್ತಾವಿಕ ಮತ್ತು ಸ್ವಾಗತ ಭಾಷಣ ಮತ್ತು ಶ್ರೀಮತಿ ಸೋನೊಳಿ ಅವರು ಸನ್ಮಾನಿತರ ಪರಿಚಯ ಮಾಡಿದರು, ಮುಖ್ಯ ಕಾರ್ಯಕ್ರಮದ ನಿರೂಪಣೆಯನ್ನು ಡಾ. ಭಾರತಿ ಮಠದ ಮತ್ತು ಶ್ರೀಮತಿ ಸುನಂದಾ ಎಮ್ಮಿ ಅವರುಗಳು ನಿರ್ವಹಿಸಿದರು.
ಶ್ರೀಮತಿ ನೀಲಗಂಗಾ ಚರಂತಿಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುಮಾ ಬೇವಿನಕೊಪ್ಪ ಮಠ ಅವರು ವಂದಿಸಿದರು.
ವಚನಗಾಯನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಕ್ಕನ ಬಳಗದ ಕಾರ್ಯಕ್ರಮಗಳಲ್ಲಿ ವಿಶೇಷ ಕಾರ್ಯ ಮಾಡಿದ ಹಲವು ಜನರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
.