ಕೊಪ್ಪಳ ೧೮ : ಕೊಪ್ಪಳವು ಪ್ರಾಚೀನ ಕಾಲದಲ್ಲಿ ಪ್ರಮುಖ ತಾಣವಾಗಿದ್ದು ವಾಣಿಜ್ಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. ಇಲ್ಲಿ ಅನೇಕ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವೆಂದು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ ಪೂಜಾರವರು ನುಡಿದರು. ಅವರು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯ ಕೊಪ್ಪಳ ಹಾಗೂ ಮೇಘನ ಪ್ರಕಾಶನ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ರವರ ಕೊಪ್ಪಳ ಸ್ಥಳನಾಮ : ಒಂದು ವಿಶ್ಲೇಷಣೆ ಎಂಬ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಕೊಪ್ಪಳ ಸ್ಥಳನಾಮವು ಪ್ರಾಚೀನ ಕಾಲದಿಂದಲೂ ಬದಲಾಗುತ್ತ ಅದರ ವೈಶಿಷ್ಟö್ಯವನ್ನು ಮೆರೆಯುತ್ತಾ ಅಂದಿನ ಕಾಲದ ಚರಿತ್ರೆ, ಸಂಸ್ಕೃತಿ ಮತ್ತು ಆಡಳಿತ ವ್ಯವಸ್ಥೆಯನ್ನು ತಿಳಿಸುತ್ತಾ ಬಂದಿರುವುದು ಈ ಗ್ರಾಮದ ವಿಶೇಷತೆ ಎಂದರು. ಭದ್ರತಾ ಕಾವಲುಗಾರರಾದ ಗವಿಸಿದ್ಧಪ್ಪ ಕಡೆಮನಿಯವರು ಕೃತಿಯನ್ನು ಲೋಕಾರ್ಪಣೆ ಮಾಡಿ ಇಂತಹ ಕೃತಿ ಬಿಡುಗಡೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ನುಡಿದರು. ಕೃತಿಯನ್ನು ಕುರಿತು ಪ್ರಾಧ್ಯಾಪಕರಾದ ಡಾ.ರಾಜು ಹೊಸಮನಿಯವರು ಕೃತಿಯ ಸಮಗ್ರ ಪರಿಚಯ ಮಾಡುತ್ತಾ ಕುಪಣದಿಂದ ಕೊಪ್ಪಳದವರಗೆ ಹೇಗೆ ಬದಲಾಗುತ್ತಾ ಬಂದಿದೆ ಎಂಬುದನ್ನು ಈ ಕೃತಿ ವಿವರಿಸುತ್ತದೆ ಎಂದು ನುಡಿದರು. ಪದವಿ ಪೂರ್ವ ಪ್ರಾಚಾರ್ಯರಾದ ಡಾ.ವಿರೇಶಕುಮಾರ ಎನ್.ಎಸ್ ಹಾಗೂ ಪ್ರಾಧ್ಯಾಪಕರುಗಳಾದ ಡಾ.ದಯಾನಂದ ಸಾಳುಂಕೆ, ಪ್ರೊ.ಶರಣಬಸಪ್ಪ ಬಿಳೆಎಲಿ, ಡಾ.ಬಾಳಪ್ಪ ತಳವಾರ ವೇದಿಕೆ ಮೇಲೆ ಉಪಸ್ಥಿತರಿದ್ದು ಈ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಚನ್ನಬಸವರವರು ಮಾತನಾಡುತ್ತಾ ಇದು ಕಿರು ಹೊತ್ತಿಗೆಯಾದರೂ ಇಡೀ ಕೊಪ್ಪಳದ ಚರಿತ್ರೆಯನ್ನು ಹೇಳುವುದರ ಜೊತೆಗೆ ಸ್ಥಳನಾಮದ ವೈಶಿಷ್ಟö್ಯವನ್ನು ತಿಳಿಸಿಕೊಡುತ್ತದೆ ಎಂದರು.
ಕುಮಾರಿ ಕಾವೇರಿ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಕು.ಎಚ್ ರಮೇಶ ಸ್ವಾಗತಿಸಿದರೆ ಕೊನೆಗೆ ಕು.ವಿದ್ಯಾಶ್ರೀ ವಿ.ಯವರು ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಕು.ಶಶಿಕುಮಾರ ಉಳ್ಳಾಗಡ್ಡಿ ಮತ್ತು ಕು.ವಿಜಯಲಕ್ಷ್ಮೀಯವರು ನೆರವೇರಿಸಿದರು.