ಬೆಳಗಾವಿ, ಜ.೩೧: ಕುಷ್ಠರೋಗವು ಒಂದು ಮೈಕ್ರೊ ಬ್ಯಾಕ್ಟಿರಿಯ ಲೇಪ್ರೆ ಎಂಬ ರೋಗಾಣುವಿನಿಂದ ಸಾಂಕ್ರಾಮಿಕ ರೋಗವಾಗಿದ್ದು ಸಾರ್ವಜನಿಕರು ಇದಕ್ಕೆ ಭಯ ಪಡುವ ಅಗತ್ಯವಿಲ್ಲ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹೇಶ ಕೋಣಿ ಹೆಳಿದರು.
“ಸ್ಪರ್ಶ” ಕುಷ್ಠರೋಗ ಜಾಗೃತಿ ಅರಿವು ಆಂದೋಲನ-೨೦೨೩ ರ ಅಂಗವಾಗಿ ಜನೇವರಿ ೩೦ ರಿಂದ ಫೆಬ್ರುವರಿ-೧೩ರ ವರೆಗೆ ನಡೆಯಲಿರುವ ಅಭಿಯಾನಕ್ಕೆ ಜಿಲ್ಲಾ ಕುಷ್ಠರೋಗ ನಿಯಂತ್ರಣ ವಿಭಾಗ ಆವರಣದಲ್ಲಿ ಸೋಮವಾರ(ಜ.೩೦) ಚಾಲನೆ ನೀಡಿ, “ಕುಷ್ಠರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವಾಗಿಸೋಣ” ಎಂಬ ಘೋಷಣೆಯೊಂದಿಗೆ ಬಿತ್ತಿ ಪ್ರತಗಳು, ಕರಪತ್ರಗಳು, ಬ್ಯಾನರ್ಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕುಷ್ಠರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳು ಬಹು ಔಷಧಿ ಚಿಕಿತ್ಸೆ ಉಚಿತವಾಗಿ ಸಿಗುತ್ತದೆ. ಹಾಗೂ ಸಂಪೂರ್ಣವಾಗಿ ಗುಣಹೊಂದುತ್ತದೆ. ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಬಗ್ಗೆ ನೆರೆ-ಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ಅವಶ್ಯಕ ಚಿಕಿತ್ಸೆ ನೀಡುವಾಗ ಬೇಧ ಭಾವ ಮಾಡದೆ ಗೌರವಯುತವಾಗಿ ಉಪಚರಿಸಿ ರೋಗಿ ಗುಣಮುಖಹೊಂದಲು ಸಹಕರಿಸಿ ಸಮಾಜದಲ್ಲಿ ರೋಗದ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಪ್ರಾರಂಭದ ಹಂತದಲ್ಲಿ ರೋಗ ಪತ್ತೆ ಮಾಡಿ ಬಹುಔಷಧಿ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗುವುದಲ್ಲದೆ ಮುಂದಾಗಬಹುದಾದ ವಿಕಲಾಂಗತೆಯನ್ನು ಕೂಡ ತಡೆಗಟ್ಟಬಹುದು. ಇದಕ್ಕೆಲ್ಲಾ ಮಿಗಿಲಾಗಿ ಸಮಾಜದಲ್ಲಿರುವ ನಾವೆಲ್ಲರೂ ಒಗ್ಗಟಾಗಿ ಈ ದಿಸೆಯಲ್ಲಿ ಕೆಲಸ ಮಾಡಿದರೆ ಗಾಂಧೀಜಿಯವರ ಕನಸು “ಕುಷ್ಠರೋಗ ಮುಕ್ತ ಭಾರತ” ವನ್ನು ನಿರ್ಮಿಸಬಹುದಾಗಿದೆ ಎಂದು ಹೆಳಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ಚಾಂದಿನಿ ಜಿ. ದೇವಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸದರಿ ಕಾರ್ಯಕ್ರಮವನ್ನು ಜನೇವರಿ ೩೦ರ ಎಲ್ಲ ಗ್ರಾಮ ಪಂಚಾಯತ ಮತ್ತು ಪುರಸಭೆಗಳಲ್ಲಿ ಸಂಬಂಧಪಟ್ಟ ಅಧ್ಯಕ್ಷರ, ಅಧ್ಯಕ್ಷತೆಯಲ್ಲಿ ಕುಷ್ಠರೋಗ ನಿವಾರಿಸಲು “ಕುಷ್ಠರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವಾಗಿಸೋಣ” ಎಂಬ ಘೋಷಣೆಯೊಂದಿಗೆ ಸದಸ್ಯರುಗಳು ಮತ್ತು ಸಾರ್ವಜನಿಕರು ಸಮೂಹದಲ್ಲಿ ಪ್ರತಿಜ್ಞೆ ಮಾಡುವುದು.
ಸಾರ್ವಜನಿಕರಲ್ಲಿ ಕುಷ್ಠರೋಗದ ಬಗ್ಗೆ ಇರುವ ಅವೈಜ್ಞಾನಿಕ ನಂಬಿಕೆಗಳನ್ನು ಹೋಗಲಾಡಿಸಿ ಈ ಖಾಯಿಲೆಯ ಇತರೆ ಖಾಯಿಲೆಗಳಂತೆ ಒಂದು ಸಾಮಾನ್ಯ ಖಾಯಿಲೆಯಾಗಿದ್ದು ಬಹು ಔಷಧಿ ಚಿಕಿತ್ಸೆ ವಿದಾನದ ಮೂಲಕ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದೆಂದು ಸಮೂದಾಯದಲ್ಲಿ ಅರಿವು ಮೂಡಿಸಲು ಈ ಪಾಕ್ಷಿಕ ಆಚರಣೆ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಬೆಳಗಾವಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುಷ್ಠರೋಗ ನಿರ್ಮೂಲನೆ ಅಂದರೆ ಸ್ಥಾನಿಕತೆ ಹತ್ತು ಸಾವಿರ ಜನಸಂಖ್ಯೆಗೆ ೦೧ ಕ್ಕಿಂತ ಕಡಿಮೆ ಮಾಡುವುದು ಕುಷ್ಠರೋಗದ ಪಿಡಿತ ವ್ಯಕ್ತಿಗಳಿಗೆ ಅಂಗವಿಕಲತೆ ತಡೆಗಟ್ಟುವುದು ಮತ್ತು ವೈದ್ಯಕೀಯ ಪುನರ್ಮನನ ವ್ಯವಸ್ಥೆಯನ್ನು ಬಲಪಡಿಸುವುದು ಕುಷ್ಠರೋಗ ಜೊತೆಗೂಡಿರುವ ಸಮಾಜಿಕ ಪಿಡುಗನ್ನು ಕಡಿಮೆ ಮಾಡುವುದು ಉದ್ದೇಶ ಹೊಂದಿದ್ದು, ಕುಷ್ಠರೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜನ ಸಾಮಾನ್ಯರಿಗೆ ಜನಪ್ರತಿನಿಧಿಗಳ ಮುಖಾಂತರ ತಿಳಿಸಲಾಗುತ್ತದೆ.
ಜಿಲ್ಲಾ ಮತ್ತು ತಾಲೂಕೂ ಮಟ್ಟದಲ್ಲಿ ಮತ್ತು ಹೊಬಳಿ ಗ್ರಾಮ ಮಟ್ಟದಲ್ಲಿ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಿಗೆ ಹೆಚ್ಚಿನ ಅರಿವು ಮೂಡಿಸಲಾಗುವುದು. ಸದರಿ ಪಾಕ್ಷಿಕ ಕಾರ್ಯಕ್ರಮವನ್ನು ಮನೆ ಮನೆಗೆ ಭೇಟಿ ನೀಡಿ ಆಶಾ ಕಾರ್ಯಕರ್ತೆಯರು, ಸುರಕ್ಷಣಾಧಿಕಾರಿಗಳು, ನಿರೀಕ್ಷಣಾಧಿಕಾರಿಗಳು ಕುಷ್ಠರೋಗ ಲಕ್ಷಣಗಳಿದ್ದವರಿಗೆ ಪತ್ತೆ ಹಚ್ಚಿ ರೋಗ ಖಚಿತವಾದ ಬಳಿಕ ಬಹು ಔಷಧಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ಹೆಳಿದರು.
ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಬಿ.ಎನ್ ತುಕ್ಕಾರ, ಡಾ.ಎಮ್.ಎಸ್. ಪಲ್ಲೇದ, ಡಾ. ಅನೀಲ ಕೊರಬು, ಶ್ರೀ. ಶಿವಾಜಿ ಮಾಳಗನ್ನವರ, ವೈದ್ಯಾಧಿಕಾರಿ ಡಾ. ಪ್ರಕಾಶ ವಾಲಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭರತ ಹೆಚ್. ಬಹುರೂಪಿ ಸ್ವಾಗತಿಸಿದರು. ಸಹಾಯಕ ಕುಷ್ಠರೋಗ ನಿಯಂತ್ರಣ ಅಧಿಕಾರಿ ಪ್ರಕಾಶ ಮಾನೆ ಉಪ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಆರೋಗ್ಯ ಅಧಿಕಾರಿ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.