ಬೆಳಗಾವಿ: ಮಹಿಳೆಯರು ರಂಗ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿ ಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಹೇಳಿದರು.
ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದವರು ಶ್ರೀಮತಿ ಯಶೋದಾಬಾಯಿ ಕಾಗತಿ, ಶ್ರೀಮತಿ.ಪಾರ್ವತಿ ಪಾಟೀಲ್ , ಶ್ರೀಮತಿ ಮಲ್ಲವ್ವ ಪಾಟಿಲ್, ಶ್ರೀ ರೇವಣಸಿದ್ದಪ್ಪ ಲಂಬಿ ಮತ್ತು ಶ್ರೀಮತಿ ಮೀನಾಕ್ಷಿ ಲಂಬಿ ,ಅವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಂಗ ಚಟುವಟಿಕೆಗಳಲ್ಲಿ ಮಹಿಳೆಯರು ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು, ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ರಂಗ ಚಟುವಟಿಕೆಯಿಂದ ದೂರ ಇಡಲಾಗಿತ್ತು ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಗಳು ಕೂಡ ಪುರುಷರೇ ಆಗಿರುತ್ತಿದ್ದರು, ಮಹಿಳೆಯರು ನಾಟಕಗಳಲ್ಲಿ ಅಭಿನಯಿಸಬಾರದು ಎನ್ನುವ ನಿರ್ಬಂಧ ಅದರೊಂದಿಗೆ ನಾಟಕಗಳನ್ನು ಕೂಡ ನೋಡಬಾರದು ಎನ್ನುವ ನಿರ್ಬಂಧ ಇತ್ತು ಅವರಿಗೆ ಎಷ್ಟೇ ಆಸೆ ಆಕಾಂಕ್ಷೆಗಳು ಇದ್ದರು ಕೂಡ ಪುರುಷ ಪ್ರಧಾನ ಸಮಾಜದಲ್ಲಿ ನಿರ್ಬಂಧಗಳನ್ನು ಪಾಲಿಸುವುದು ಅವರಿಗೆ ಅನಿವಾರ್ಯವಾಗಿತ್ತು ಎಂದರು.
ಶ್ರೀ ಕೃಷ್ಣ ಪಾರಿಜಾತ ಮತ್ತು ಕಂಪನಿ ನಾಟಕಗಳಲ್ಲಿ ಕೌಜಲಗಿ ನಿಂಗಮ್ಮ , ಎಲ್ಲವ್ವ ಗುಳೇದಗುಡ್ಡ ಮುಂತಾದವರು ಪಾತ್ರಧಾರಿಗಳಾಗುವ ಮೂಲಕ ನಾಟಕಗಳಿಗೆ ಸ್ತ್ರೀಯರ ಪ್ರವೇಶವಾಯಿತು , ಕೊಲ್ಲಾಪುರದ ಮಹಾರಾಜರು ಸೇರಿದಂತೆ ಅನೇಕ ಕಲಾ ಪೋಷಕರು ಸ್ತ್ರೀ ಪಾತ್ರಧಾರಿಗಳಿಗೆ ವಿಶೇಷ ಪ್ರೋತ್ಸಾಹ ನೀಡಿದರು, ನಂತರದ ದಿನಗಳಲ್ಲಿ ಮಹಿಳೆ ರಂಗಭೂಮಿಯಲ್ಲಿ ಪಾತ್ರಗಳನ್ನು ನಿರ್ವಹಿಸಲು ಪ್ರಾರಂಭಿಸಿದರಾದರೂ ಪುರುಷರಿಗೆ ಸರಿಸಮನಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇಂದಿಗೂ ಮುಂದೆ ಬರುತ್ತಿಲ್ಲ ಎಂದ ರಾಮಕೃಷ್ಣ ಮರಾಠೆ ಅವರು ಸ್ತ್ರೀಯರು ತಮ್ಮನ್ನು ತಾವು ರಂಗ ಚಟುವಟಿಕೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ದತ್ತಿದಾನಿಗಳು ಮುಂದೆ ಬಂದು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದರು.
ಪ್ರಜಾಪ್ರಭುತ್ವ ಮತ್ತು ಪತ್ರಿಕೆಗಳು ವಿಷಯದ ಕುರಿತು ಹಿರಿಯ ಪತ್ರಕರ್ತ ಮುರುಗೇಶ್ ಶಿವಪೂಜಿ ಮಾತನಾಡಿ ಕಳೆದ ಮೂರು ದಶಕಗಳಲ್ಲಿ ಅಗಾಧವಾಗಿ ಬೆಳೆದ ಮತ್ತು ಮಾಧ್ಯಮ ಕ್ಷೇತ್ರದಲ್ಲಿನ ಬೃಹತ್ ತಂತ್ರಜ್ಞಾನದ ಬಳಕೆ ಕುರಿತು ವಿವರಿಸಿದರು.
ದತ್ತಿ ದಾನಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮಾತನಾಡಿ ಮೊದಲ ಬಾರಿಗೆ ತಾವು ನಾಟಕ ನೋಡಲು ತೆರಳಿದ ಸಂದರ್ಭವನ್ನು ವಿವರಿಸಿ ಮಹಿಳೆಯರು ನಾಟಕ ನೋಡಲು ಹೋಗುವುದಕ್ಕೆ ಇದ್ದ ನಿರ್ಬಂಧವನ್ನು ವಿವರಿಸಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲ ಸಚಿವೆ ಡಾ.ವಿಜಯಲಕ್ಷ್ಮಿ ಪುಟ್ಟಿ ಅವರು ತಮಗೆ ನೀಡಲಾದ ಸನ್ಮಾನಕ್ಕೆ ಉತ್ತರವಾಗಿ ಮಾತನಾಡಿ ತಮ್ಮ ಹಾಗೂ ಬೆಳಗಾವಿ ಸಾಂಸ್ಕೃತಿಕ ವಲಯದ ಚಟುವಟಿಕೆ ಮತ್ತು ಸಂಬಂಧಗಳನ್ನು ನೆನಪು ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಡಾ ವಿಜಯಲಕ್ಷ್ಮಿ ಪುಟ್ಟಿ, ಡಾ ರಾಮಕೃಷ್ಣ ಮರಾಠೆ, ದತ್ತಿಧಾನಿಗಳಾದ ಶ್ರೀಮತಿ ಮಂಗಲಾ ಮೆಟ್ ಗುಡ್ ಶ್ರೀಮತಿ ನಂದಾ ಘಾರ್ಗಿ ಶ್ರೀಮತಿ ಆಶಾ ಪಾಟೀಲ್ ಅವರುಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಲೇಖಕೆರ ಸಂಘದ ಅಧ್ಯಕ್ಷೆ ಶ್ರೀಮತಿ ಜಯಶೀಲಾ ಬ್ಯಾಕೋಡ್ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶೈಲಜಾ ಭಿಂಗೆ ಮತ್ತು ಶ್ರೀಮತಿ ಇಂದಿರಾ ಮೂಟೆಬೆನ್ನೂರು ಅವರುಗಳು ಕಥಾ ವಾಚನ ಮಾಡಿದರು, ಡಾ ಭಾರತಿ ಮಠದ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀಮತಿ ಜಯಶ್ರೀ ನಿರಾಕಾರಿ ಅವರು ವಚನ ಪ್ರಾರ್ಥನೆ ಮಾಡಿದರು,
ಶ್ರೀಮತಿ ಪ್ರತಿಭಾ ಕಳ್ಳಿಮಠ ಮತ್ತು ಶ್ರೀಮತಿ ಅನಿತಾ ಮಾಲಗತ್ತಿ ಅವರುಗಳು ಅತಿಥಿಗಳ ಪರಿಚಯ ಮಾಡಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ, ಹಿರಿಯ ಸಾಹಿತಿಗಳಾದ ಶ್ರೀಮತಿ ನೀಲಗಂಗಾ ಚರಂತಿಮಠ, ಶ್ರೀಮತಿ ಆಶಾ ಕಡಪಟ್ಟಿ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.