ಕುಷ್ಟಗಿ:-ತಾಲೂಕಿನ ದೋಟಿಹಾಳದಲ್ಲಿ ಸತತ ಆರು ದಿನಗಳ ಕಾಲ ನಡೆದುಕೊಂಡ ಬಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಲಿಖಿತ ಪತ್ರಗಳ ಭರವಸೆ ಹಿನ್ನಲೆಯಲ್ಲಿ ರವಿವಾರ ಮುಕ್ತಾಯಗೊಂಡಿತು.
ಈ ವೇಳೆ ಹೈದರಾಬಾದ್- ಕರ್ನಾಟಕ ಯುವಶಕ್ತಿ(ರಿ) ಕುಷ್ಟಗಿ, ಸಂಘಟನೆಯ
ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ ಮಾತನಾಡಿ, ನಾವು ಆರು ದಿನಗಳಿಂದ ದೋಟಿಹಾಳ ಗ್ರಾಮದಲ್ಲಿ ಜಾಗೃತಿ ಜಾಥಾ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದು, ಸ್ಥಳಕ್ಕೆ
ತಹಸೀಲ್ದಾರ ರಾಘವೇಂದ್ರ ಕುಲಕರ್ಣಿ, ನಂತರ ಜಿಲ್ಲಾ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶಟ್ಟಿ, ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಲಕಾನಂದ ಮಳಗಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರು, ಹಾಗೂ ಪಿಡಬ್ಲೂಡಿ ಎಇಇ ಪ್ರಭು ಹುನಗುಂದ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ತಮ್ಮ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆ ಹಾಗೂ ಲಿಖಿತ ಭರವಸೆ ಪತ್ರಗಳನ್ನು ಧರಣಿ ನಿರತ ಸಂಘಟನೆಗಳ ಮುಖ್ಯಸ್ಥರಿಗೆ ನೀಡಿ, ಹೋರಾಟವನ್ನು ಹಿಂದಕ್ಕೆ ಪಡೆಯುವಂತೆ ಮನವೊಲಿಸಿದ್ದರು. ಆದಾಗ್ಯೂ ನಾವು ನಮಗೆ ಭರವಸೆಯ ಪತ್ರ ಹಾಗೂ ರಸ್ತೆಯ ಕಾಮಗಾರಿ ಪ್ರಗತಿ ಆಗುವವರೆಗೂ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವದಿಲ್ಲ ಎಂದು ಹೇಳಲಾಗಿತ್ತು.
ಅದೇ ಪ್ರಕಾರವಾಗಿ ಇಂದು ರಸ್ತೆಯ ಕಾಮಗಾರಿಗಾಗಿ ಸಿಮೆಂಟ್ ಪೈಪಗಳನ್ನು ಹಾಕಲಾಗಿದೆ ಹಾಗೂ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ಆರೋಗ್ಯ ಇಲಾಖೆ ಸಹ ನಿರ್ದೇಶಕರಿಗೆ ಪ್ರಸ್ತಾವನೆಯನ್ನು ಸಲ್ಲಿಸಿ, ಅದರ ಪ್ರತಿಯನ್ನು ನಮಗೆ ನೀಡಿದ್ದಾರೆ ಹಾಗೂ ತಹಸೀಲ್ದಾರ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯವೈಖರಿಯ ಮೇಲೆ ಭರವಸೆ ಹಾಗೂ ಧನಾತ್ಮಕ ನಿರೀಕ್ಷೆ ಇಟ್ಟುಕೊಂಡು ಸುಮಾರು ಆರು ದಿನಗಳಿಂದ ನಡೆಸಿರುವ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿದ್ದೇವೆ, ಎಂದರು.
ಒಂದು ವೇಳೆ ಈ ಈ ಹಕ್ಕೋತ್ತಾಯಗಳು ಚುನಾವಣೆ ನೀತಿ ಸಂಹಿತೆ ಆದೇಶ ಜಾರಿಗೂ ಮುನ್ನ ಈಡೇರದಿದ್ದರೆ,ಬರುವ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳ ನಂತರ ಮತ್ತೆ ಈ ಮೂರು ಬೇಡಿಕೆಗಳ ಈಡೇರಿಕೆಗಾಗಿ ಉಗ್ರವಾದ ಹೋರಾಟ ಆರಂಭಿಸಲಾಗುತ್ತದೆ, ಎಂದು ತಿಳಿಸಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ