ಮೂಡಲಗಿ: ಭಾರತ ಜ್ಞಾನವನ್ನು ಪ್ರೀತಿಸುವ,ಜೀವ ಸೃಷ್ಟಿಸುವವರ ಹಿಂದೂ ರಾಷ್ಟ್ರವಾಗಿದ್ದು, ನಮ್ಮದು ಪರಮತ -ಪರಧರ್ಮವನ್ನು ವಿರೋಧಿಸದೆ ಅವುಗಳನ್ನು ಪ್ರೀತಿಸುವ, ಪರಧರ್ಮ ಸಹಿಂಷ್ಣುತಾ ದೇಶವಾಗಿದೆಂದು ಕೊಲ್ಲಾಪುರ ಕನ್ನೇರಿಯ ಸಿದ್ದಗಿರಿ ಮಠದ ಜಗದ್ಗುರು ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದಲ್ಲಿ ಬುಧವಾರ-ಗುರುವಾರ ಎರಡು ದಿನಗಳ ಕಾಲ ಜರುಗದ ವಿರಾಟ ಹಿಂದೂ ಧರ್ಮ ಜಾಗೃತಿ ಸಮಾವೇಶದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿ, ನಮ್ಮ ದೇಶ ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂಸ್ಕೃತಿಯನ್ನು ಹೊಂದಿದೆ. ಪರರಾಷ್ಟ್ರದಿಂದ ಬಂದವರೆಲ್ಲರನ್ನು ಪ್ರೀತಿಯಿಂದ ಅಪ್ಪಿಕೊಂಡು ನೆಲೆ ನೀಡಿದ್ದೇವೆ. ಈಗ ಬಂದವರೆಲ್ಲರೂ ನಮ್ಮನ್ನೇ ಹೊರ ಹಾಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಹೊರಗಿನ ದೆವ್ವ ಬಂದು, ಮನ್ಯಾಗಿನ ದೆವ್ವನ್ನು ಹೊರ ಹಾಕಿದಂತೆ, ಭಾರತದಲ್ಲಿ ಹಿಂದುಗಳ ಸ್ಥಿತಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವ ಧರ್ಮದಲ್ಲಿ ಹುಟ್ಟಿದೆವೋ ಆ ಧರ್ಮವನ್ನು ಪ್ರೀತಿಸುವ ಗೌರವಿಸುವ, ತಂದೆ ತಾಯಿ, ಗುರು- ಹಿರಿಯರು, ದೇಶ-ಭಾಷೆಯನ್ನು ಪ್ರೀತಿಸುವುದನ್ನು ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಕಲಿಸಿಕೊಡಬೇಕೆಂದು ತಿಳಿಸಿದರು.
ಹಿಂದೂ ಜಾಗರಣ ವೇದಿಕೆಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಹಾಗೂ ವಾಗ್ಮಿ ಜಗದೀಶ್ ಕಾರಂತ ಮಾತನಾಡಿ, ಭಾರತ ಹಿಂದೂಗಳ ಅಪ್ಪಟ ರಾಷ್ಟ್ರ. ಹಿಂದುಗಳು ಸ್ವಾಭಿಮಾನಿಗಳಾಗಿದ್ದು, ಭಾರತದ ಆತ್ಮ -ಪ್ರಾಣ ವಾಗಿದ್ದಾರೆ.ಛತ್ರಪತಿ ಶಿವಾಜಿ- ಸಂಭಾಜಿಯಂಥ ಅನೇಕ ಮಹನೀಯರು ಹಿಂದೂ ರಾಷ್ಟ್ರ ಕಟ್ಟಲು ಬಲಿದಾನವಾಗಿದ್ದಾರೆ. ಅವರು ತಲೆಕೊಟ್ಟರೆ ವಿನ: ಧರ್ಮ ಕೊಡಲಿಲ್ಲ ಎಂದು ಹೇಳಿದ ಕಾರಂತರು, ಭಾರತ ಹಿಂದುತ್ವದ ನೆಲಗಟ್ಟಿನಲ್ಲಿ ಪುನರುತ್ಥಾನಗೊಂಡಿದೆ. ಹಿಂದುಗಳನ್ನು ಒಡೆದು ಆಳುವವರ ಬಗ್ಗೆ ಜಾಗೃತವಾಗಿದ್ದು, ಭಾರತವನ್ನು ಸದೃಢ ಹಿಂದೂ ರಾಷ್ಟ್ರವಾಗಿಸು ವ ಹೊಣೆಗಾರಿಕೆ ಪ್ರತಿಯೊಬ್ಬ ಹಿಂದೂವಿನದಾಗಿದೆ ಎಂದರು.
ಕನಕನಾಳದ ಗಿರೀಶಾನಂದ ಮಹಾರಾಜರು ಮತ್ತು ಹಿಂದೂ ಜಾಗೃತಿಯ ಕುರಿತು ಕುಮಾರಿ ಹಾರಿಕಾ ಮಂಜುನಾಥ ಮಾತನಾಡಿದರು.
ಅಧ್ಯಕ್ಷತೆಯನ್ನು ಮನ್ನಿಕೇರಿ ಮಹಾಂತಲಿಂಗೇಶ್ವರ ಮಠದ ವಿಜಯಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ವೇದಿಕೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ, ಇಂಡಿಯ ಸ್ವರೂಪಾನಂದ ಮಹಾಸ್ವಾಮಿಗಳು, ಹಿಪ್ಪರಗಿಯ ಸಮರ್ಥ ಸದ್ಗುರು ಪ್ರಭುಜಿ ಮಹಾರಾಜರು, ಶಿರೋಳದ ಶಂಕರಾರೂಡ ಮಹಾಸ್ವಾಮಿಗಳು, ಮುಗಳಿಹಾಳದ ಸೋಮಲಿಂಗ ಶಾಸ್ತ್ರಿಗಳು, ಶಿವರಾಜ ನಾಯಕ, ಹಣಮಂತಪ್ಪ ದೊಡ್ಡಮನಿ, ಅಶೋಕ ಉದ್ದಪ್ಪನವರ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಹಿಂದುಗಳ ಭಾರತ ಪರಧರ್ಮ ಸಹಿಷ್ಣುತಾ ದೇಶವಾಗಿದೆ- ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳು