ಕಪ್ಪತ್ತಗುಡ್ಡ ಸೂಕ್ಷ್ಮ ವಲಯ ಒಂದು ಕಿ.ಮೀಗೆ ಇಳಿಸಿದ್ದು ಆತಂಕಕಾರಿ; ಡಾ. ತೋಂಟದ ಸಿದ್ದರಾಮ ಶ್ರೀಗಳು

Murugesh Shivapuji
ಕಪ್ಪತ್ತಗುಡ್ಡ ಸೂಕ್ಷ್ಮ ವಲಯ ಒಂದು ಕಿ.ಮೀಗೆ ಇಳಿಸಿದ್ದು ಆತಂಕಕಾರಿ; ಡಾ. ತೋಂಟದ ಸಿದ್ದರಾಮ ಶ್ರೀಗಳು
WhatsApp Group Join Now

ಬೆಳಗಾವಿ/ಗದಗ; ಮಧ್ಯ ಕರ್ನಾಟಕದ ಜೀವನಾಡಿ ಆಗಿರುವ ಕಪ್ಪತ್ತಗುಡ್ಡದ ಸುತ್ತಲಿನ ಸೂಕ್ಷ್ಮ ವಲಯವನ್ನು 10 ಕಿ.ಮೀ ದಿಂದ ಒಂದು ಕಿಲೋಮೀಟರ್ ಗೆ ಇಳಿಸಿದ್ದು ಆತಂಕಕಾರಿ ವಿಷಯವಾಗಿದೆ ಈ ಕುರಿತು ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ಮಾಡಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿಯವರು ಆಗ್ರಹಿಸಿದರು.

ಅವರು ಕರ್ನಾಟಕ ಪತ್ರಕರ್ತರ ಸಂಘ ಮತ್ತು ತೋಂಟದಾರ್ಯ ಮಠದ ಸಂಯುಕ್ತ ಆಶ್ರಯದಲ್ಲಿ ಕಪ್ಪತ್ತಗುಡ್ಡದಲ್ಲಿ ಏರ್ಪಡಿಸಲಾಗಿದ್ದ 16 ಜಿಲ್ಲೆಗಳ 76 ಪತ್ರಕರ್ತರ ಕಪ್ಪತ್ತಗುಡ್ಡ ಅಧ್ಯಯನ ಪ್ರವಾಸದ ನಂತರ ನಿಯೋಗವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಹಲವಾರು ಉತ್ತಮವಾದ ಕ್ರಮಗಳನ್ನು ಕೈಗೊಂಡಿದ್ದರು ಅದೇ ರೀತಿ ಕಪ್ಪತ್ತಗುಡ್ಡವನ್ನು ಸಂರಕ್ಷಿತ ವಲಯವನ್ನಾಗಿ ಘೋಷಿಸುವಂತೆ ನಾವು ಮಾಡಿಕೊಂಡಿದ್ದ ಮನವಿಗೆ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿಯವರು ತಕ್ಷಣ ಸ್ಪಂದಿಸಿ ಒಂದು ಹೆಜ್ಜೆ ಮುಂದೆ ಹೋಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಘೋಷಿಸಿದ್ದರು. ಈ ಇಬ್ಬರ ವಿಶೇಷ ಕಾಳಜಿಯಿಂದಾಗಿ ಕಪ್ಪತ್ತಗುಡ್ಡಕ್ಕೆ ಅನುಕೂಲವಾಗಿತ್ತು, ಈಗ 10 ಕಿ.ಮೀ.ವರೆಗೆ ಇದ್ದ ಸೂಕ್ಷ್ಮ ವಲಯವನ್ನು ಒಂದು ಕಿಲೋಮೀಟರ್ ಗೆ ಇಳಿಸಿದ್ದು ಮಾತ್ರ ಸಮಾಧಾನ ತಂದಿಲ್ಲ ಇದು ಆತಂಕದ ಬೆಳವಣಿಗೆ ಎಂದು ಶ್ರೀಗಳು ಬಣ್ಣಿಸಿದರು.
ಕಪ್ಪತ್ತಗುಡ್ಡ ಯಥಾಸ್ಥಿತಿ ಯಾಗಿ ಉಳಿದು ಸಮೃದ್ಧವಾದರೆ ಮಾತ್ರ ಮಧ್ಯ ಕರ್ನಾಟಕದಲ್ಲಿ ಮಳೆ ಮತ್ತು ಬೆಳೆ ಬಂದು ಈ ನಾಡು ಸಮೃದ್ಧವಾಗಿರುತ್ತದೆ ಮಧ್ಯ ಕರ್ನಾಟಕದ ರೈತರು ಮತ್ತು ಕಪ್ಪತ್ತಗುಡ್ಡದಲ್ಲಿಯೇ ಆಶ್ರೀತವಾಗಿರುವ ಜನಾಂಗ, ತಾಂಡಾಗಳು, ಹಳ್ಳಿಗಳು ಅಲ್ಲಿನ ಪರಿಸರ ಹೈನೋಧ್ಯಮ ಎಲ್ಲವೂ ಉಳಿಯುತ್ತದೆ , ಇಲ್ಲವಾದಲ್ಲಿ ಎಲ್ಲವೂ ನಾಶವಾಗಿ ಹೋಗಲಿದೆ ಇದಕ್ಕೆ ಅವಕಾಶ ನೀಡಬಾರದು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಇಡೀ ದೇಶದಲ್ಲಿಯೇ ಅತ್ಯಧಿಕ ಆಮ್ಲಜನಕ ಇರುವ , ಎಲ್ಲಿಯೂ ಸಿಗಲಾರದ ಪರಿಶುದ್ಧ ಗಾಳಿ ಇಲ್ಲಿದೆ ಎಂದು ಸಂಶೋಧನೆ ಮಾಡಿದ ವರದಿಗಳು ಹೇಳಿವೆ ಈಗಲೇ ಎಚ್ಚೆತ್ತುಕೊಂಡು ಉಳಿಸಿಕೊಳ್ಳದಿದ್ದರೆ ಮುಂದೊಂದು ದಿನ ಗಾಳಿಯನ್ನು ಕೊಂಡು ಉಸಿರಾಡುವ ಪರಿಸ್ಥಿತಿ ಬಂದೀತು ಉತ್ತರ ಭಾರತದ ಆಯುರ್ವೇದ ಪಂಡಿತರು ಇಲ್ಲಿಗೆ ಅಮೂಲ್ಯ ಆಯುರ್ವೇದ ಬೇರುಗಳಿಗಾಗಿ ಹುಡುಕಾಟಕ್ಕೆ ಬರುತ್ತಾರೆ ಅವುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ, ಪರಿಸರ ರಕ್ಷಣೆಯಾದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ ಇದನ್ನು ಈ ನಾಡಿನ ಜನ ಅರಿತುಕೊಂಡು ಗಂಭೀರವಾಗಿ ಪರಿಗಣಿಸಬೇಕು ಎಂದವರು ವಿನಂತಿಸಿದರು.
ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆ ನಡೆಯಬಾರದು, ಇಲ್ಲಿ ಸ್ಥಾಪಿಸಲಾಗಿರುವ ನೂರಾರು ಗಾಳಿ ಯಂತ್ರಗಳಿಂದ ಈಗಾಗಲೇ ಇಲ್ಲಿನ ವನ್ಯಜೀವಿಗಳಿಗೆ ಬಹಳಷ್ಟು ತೊಂದರೆ ಆಗಿದೆ, ಇಲ್ಲಿ ಪರಿಸರ ಪ್ರವಾಸೋದ್ಯಮ ಆರಂಭವಾಗಲಿ ಪರಿಸರಪ್ರಿಯರು ಇಲ್ಲಿ ಬರುವಂತಾಗಲಿ ಇಲ್ಲಿನ ಅತ್ಯುತ್ತಮ, ಅಮೃತಮಯ ಗಾಳಿಯ ಸೇವನೆಯಿಂದ ಅವರಿಗೆ ಆರೋಗ್ಯದ ಸಮಸ್ಯೆಗಳು ದೂರವಾಗಲಿ ಈ ಹಿಂದೆ ಕೊಡಗಿನಲ್ಲಿ ನಡೆದ ಮತ್ತು ಕೇಳದ ವಯನಾಡಿನಲ್ಲಿ ನಡೆದ ರೀತಿಯಲ್ಲಿ ಭೂಕುಸಿತ ಪ್ರಕರಣಗಳು ಇಲ್ಲಿಯೂ ನಡೆಯಬಹುದಾದ ಆತಂಕವಿದೆ ಆದಕಾರಣ ಬೇರೆ ಬೇರೆ ರೀತಿಯ ವಾಣಿಜ್ಯ ಚಟುವಟಿಕೆಗಳು ಮಾತ್ರ ಇಲ್ಲಿ ಆರಂಭವಾಗುವುದು ಬೇಡ ಎಂದು ಅವರು ಸರ್ಕಾರಕ್ಕೆ ಬಲವಾಗಿ ಒತ್ತಾಯಿಸಿದರು.
ಕಪ್ಪತ್ತಗುಡ್ಡದ ಮೇಲೆ ಪತ್ರಕರ್ತರು ಮಾನವ ಸರಪಳಿ ನಿರ್ಮಿಸಿ ಕಪ್ಪತ್ತಗುಡ್ಡದ ಪರಿಸರ ರಕ್ಷಣೆಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದು ಮಾದರಿಯಾಗಿದೆ ನನಗಂತೂ ಒಂದು ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ ಎಂದವರು ಹೇಳಿದರು.
ಹಿರಿಯ ಸಾಹಿತಿ ಸಿದ್ದು ಯಾಪಲಪರವಿ ಅವರು ಮಾತನಾಡಿ ಕೊರೋನಾ ರೋಗದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಏನೆಲ್ಲಾ ಅವಾಂತರ ನಡೆಯಿತು ಎನ್ನುವುದನ್ನು ಎಲ್ಲರೂ ನೆನಪು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಕಪ್ಪತ್ತಗುಡ್ಡವು ಮತ್ತು ಇಲ್ಲಿನ ಅತ್ಯಮೂಲ್ಯ ಪರಿಶುದ್ಧ ಪರಿಸರ ಯಥಾವತ್ತಾಗಿ ಉಳಿಯದೆ ಹೋದಲ್ಲಿ ಅದಕ್ಕೆ ಮಾಧ್ಯಮದವರು ಮತ್ತು ಬುದ್ಧಿಜೀವಿಗಳೇ ಕಾರಣವಾಗುತ್ತಾರೆ ಆ ಆರೋಪ ನಮ್ಮ ಮೇಲೆ ಬೇಡ ಅದಕ್ಕಾಗಿ ನಾವೆಲ್ಲ ಸೇರಿ ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಮಾಡೋಣ ಎಂದು ಅವರು ಕರೆ ನೀಡಿದರು.
ಹಲವು ದಶಕಗಳಿಂದ ಕಪ್ಪತ್ತಗುಡ್ಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಸಿದ್ದು ಸತ್ಯಣ್ಣವರ್ ಮಾತನಾಡಿ 150 ವರ್ಷಗಳಿಂದ ಗುಡ್ಡವು ಸಾಕಷ್ಟು ಪಲ್ಲಟಗಳನ್ನು ಕಂಡಿದೆ, ಇತ್ತೀಚಿನ ದಿನಗಳಲ್ಲಿ ಮಾನವ ಹಸ್ತಕ್ಷೇಪ ಇಲ್ಲಿ ಕಡಿಮೆಯಾಗಿದೆ, ಪರಿಸರದ ಉಳಿವಿಗಾಗಿ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿದೆ, ಹೆಚ್ಚಿನ ಪ್ರಮಾಣದ ಕಾವಲುಗಾರರನ್ನು ನೇಮಿಸಿದೆ ಆಯುರ್ವೇದ ಸಸ್ಯಗಳ ಸಂರಕ್ಷಣೆಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದು ಸ್ವಾಗತಾರ್ಹವಾಗಿದೆ, ಎಂದರು.
ಕಪ್ಪತ್ತಗುಡ್ಡದಲ್ಲಿ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳನ್ನು ಸ್ವಾಗತಿಸಿದರು.
ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ಹರಿನಾಥ ಬಾಬು ಮಾತನಾಡಿ ಈ ಗುಡ್ಡದಲ್ಲಿ ಎಲ್ಲವೂ ಇದೆ ಅದನ್ನು ಕಂಡುಕೊಳ್ಳುವ ದೃಷ್ಟಿ ಬೇಕಿದೆ ಅದನ್ನು ಉಳಿಸುವ ಮನಸ್ಸು ಬೇಕಿದೆ , ಇಲ್ಲಿನ ಗಿಡಮರಗಳು ಆಡುವ ಪಿಸು ಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಕಪ್ಪತ್ತಗುಡ್ಡದಲ್ಲಿ ಪತ್ರಕರ್ತರ ನಿಯೋಗಕ್ಕೆ ಮಾರ್ಗದರ್ಶನ ನೀಡಿ ಸಂಪೂರ್ಣ ಪರಿಸರದ ಮಾಹಿತಿ ಒದಗಿಸಿದ ಅರಣ್ಯಾಧಿಕಾರಿ ಸಂಗಮೇಶ್ ಬಿ ಎಸ್ ಅವರು ಮಾತನಾಡಿ ಎಂಬತ್ತು ಸಾವಿರ ಎಕರೆ ವಿಸ್ತಾರದ ಅರಣ್ಯವು 62 ಕಿಲೋಮೀಟರ್ ಉದ್ದ ಹಾಗೂ ನಾಲ್ಕು ಕಿಲೋಮೀಟರ್ ನಷ್ಟು ಅಗಲವಾದ ಈ ಪ್ರದೇಶದಲ್ಲಿ ನೂರಾರು ಪ್ರಭೇದಗಳ ಆಯುರ್ವೇದ ಸಸ್ಯ ಸಂಪತ್ತಿನೊಂದಿಗೆ ವಿಶಿಷ್ಟ ಜಾತಿಯ ಬೆಕ್ಕು , ಕತ್ತೆಕಿರುಬು, ತೋಳ, ನರಿ ನಾಲ್ಕು ಪ್ರಜಾತಿಯ ಜಿಂಕೆ ಮುಂತಾದ ವನ್ಯ ಜೀವಿ ಸಂಪತ್ತು ಕೂಡ ಇವೆಲ್ಲವುಗಳ ರಕ್ಷಣೆಗಾಗಿ ಮತ್ತು ಕಾಡಿನ ಬೆಂಕಿಯ ರಕ್ಷಣೆಗಾಗಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದುರೆಮೋತಿ, ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಸುದೇಶ್ ಕುಮಾರ್, ಸಂಪತ್ ಕುಮಾರ್ ಮುಚ್ಚಳಂಬಿ, ಶಿವಾನಂದ ಚಿಕ್ಕಮಠ, ಮಲ್ಲಿಕಾರ್ಜುನ ಎಚ್, ಸಂಘದ ಜಿಲ್ಲಾಧ್ಯಕ್ಷರುಗಳಾದ, ರಮೇಶ್ ಭಜಂತ್ರಿ, ಶರಣಪ್ಪ ಗುಮಗೇರಾ, ಡಿ ಬಿ ವಿಜಯಶಂಕರ್, ಡಾ ಮಂಜುನಾಥ , ಜಿಎಂ ರಾಜಶೇಖರ, ಅರುಣ ಭೂಪಾಲ್, ಸೋಮಶೇಖರ್ ಹಿರೇಮಠ ,ರಾಜು ದಖನಿ, ಮಾಲತೇಶ್ ಅಂಗೂರ್, ವಾಗೀಶ್ ಪಾಟೀಲ್, ರಮೇಶ್ ವತನ್, ಯೋಗೇಶ್ ಕುಮಾರ್, ನಟರಾಜ್ ಹಂಜಗಿಮಠ, ಕಾಶೀನಾಥ್ ಮಣೂರೆ, ಇತರ ಪ್ರಮುಖರಾದ ಮಾರುತಿ ಬನವಗೋಳ, ಮಲ್ಲಿಕಾರ್ಜುನ್ ಹೆಗ್ ನಾಯಕ್, ಕಿರಣ ಚೌಗುಲಾ, ನಾಗೇಶ್ ವನ್ನೂರ್ , ಹಿರೋಜಿ ಮಾವರಕರ್, ಪಾರಿಶ್ ಭೋಸ್ಲೆ, ಈರಣ್ಣ ಬುಡ್ಡಾಗೋಳ ,ಸುಧೀರ್ ಕಳ್ಳೇ , ಕೊಟ್ರೇಶ್, ಸೌಮ್ಯ ಯಂಕಂಚಿ, ಬಸವರಾಜ ಗಾಣಿಗೇರ್, ಚೆನ್ನಪ್ಪ ಮಾದರ್, ದಾವಲ್ ಸಾಬ್ ಸೇಡಂ ಮುಂತಾದವರು ಇದ್ದರು.

WhatsApp Group Join Now
Telegram Group Join Now
Share This Article
error: Content is protected !!