ಕೊಪ್ಪಳ ಮಾರ್ಚ್ ೦೬ : ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಮಾರ್ಚ್ ೦೬ ರಂದು ಚಾಲನೆ ನೀಡಲಾಯಿತು.
ಸಿರಿಧಾನ್ಯಗಳ ಜಾಗೃತಿ ನಡಿಗೆಯನ್ನು ಕೊಪ್ಪಳ ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು. ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಸಂಸದರಾದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ರಸಾಯನಿಕವಾಗಿ ಬೆಳೆದ ಆಹಾರ ಪದಾರ್ಥಗಳ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ನಮ್ಮ ಪೂರ್ವಜರು ಅನುಸರಿಸಿದ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಸಿರಿಧಾನ್ಯಗಳ ಬಗ್ಗೆ ಇಡೀ ಜಗತ್ತಿಗೆ ಪರಿಚಯಿಸಿದ್ದು, ಇದಕ್ಕೆ ವಿವಿಧ ದೇಶಗಳು ಸಹಮತಿಸಿವೆ. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಸರ್ಕಾರದಿಂದ ರೂ. ೧೦ ಸಾವಿರಗಳ ಪ್ರೋತ್ಸಾಹ ಧನವಿದೆ ಹಾಗೂ ಸದೃಢ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯವಶ್ಯಕವಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾ ರಜತ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ ಸಿರಿಧಾನ್ಯಗಳ ಜಾಗೃತಿ ನಡಿಗೆ ಕಾರ್ಯಕ್ರಮ ತುಂಬಾ ವಿಶೇಷವಾಗಿದೆ ಎಂದು ಹೇಳಿದರು.
ಗವಿಸಿದ್ದೇಶ್ವರ ಸ್ವಾಮೀಜಿಯವರು ಮಾತನಾಡಿ, ನಿಜವಾದ ಸುಖ ಇರುವುದು ಆರೋಗ್ಯದಲ್ಲಿ ಮಾತ್ರ. ಮನುಷ್ಯ ಆರೋಗ್ಯವಾಗಿರಲು ಏನು ಉಣ್ಣಬೇಕು, ಎಷ್ಟು ಉಣ್ಣಬೇಕು, ಯಾವಾಗ ಉಣ್ಣಬೇಕು ಎಂಬುವುದು ತಿಳಿತಾಯಿಲ್ಲ. ಇದರಿಂದ ನಮ್ಮೆಲ್ಲರ ಆರೋಗ್ಯ ಕೆಡುವಂತಾಗಿದ್ದು, ಈ ಬಗ್ಗೆ ನಾವು ಜಾಗೃತಿ ವಹಿಸಬೇಕು. ನಿಸರ್ಗ ನಮಗೆ ನೀಡಿರುವ ಸಿರಿಧಾನ್ಯಗಳನ್ನು ಬಳಸಿ, ಆರೋಗ್ಯವಂತ ದೇಹ ಬೆಳೆಯಲು ಹಾಗೂ ಸಂವೃದ್ಧ ಜೀವನ ನಡೆಸಲು ಅರಿವು ಮೂಡಿಸುವ ಅಧಿಕಾರಿಗಳ ಶ್ರಮ ಶ್ಲಾö್ಯಘನಿಯ ಎಂದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ಆಹಾರ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ, ಉಪ ಕೃಷಿ ನಿರ್ದೇಶಕರಾದ ಸಹದೇವ ಯರಗೊಪ್ಪ, ಕೃಷಿ ತಂತ್ರಜ್ಞಾನ ಸಂಸ್ಥೆಯ ರಾಜ್ಯ ಪ್ರತಿನಿಧಿ ವೀರಣ್ಣ ಕಮತಾರ್ ಸೇರಿದಂತೆ ತಾಲೂಕಿನ ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ದೈಹಿಕ ಶಿಕ್ಷಕರು ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶೇಷ ಜಾಗೃತಿ : ಸಿರಿಧಾನ್ಯಗಳ ಜಾಗೃತಿ ನಡಿಗೆಯಲ್ಲಿ `ನಮ್ಮ ನಡಿಗೆ ಸಿರಿಧಾನ್ಯಗಳ ಕಡೆಗೆ, ಸಿರಿಧಾನ್ಯ ಸಿಂಗಾರ ಆರೋಗ್ಯ ಬಂಗಾರ, ಸಿರಿಧಾನ್ಯಗಳ ತಾಕತ್ತು ಸಕಲ ಪೌಷ್ಠಿಕಾಂಶಗಳ ಸಂಪತ್ತು, ಸಿರಿಧಾನ್ಯ ಬೆಳೆ ಇರಲಿ ಪ್ರೋತ್ಸಾಹ ಧನ ತರಲಿ, ಬರಗಾಲದಲ್ಲೂ ಬಂಗಾರ ಸಿರಿಧಾನ್ಯ, ಸಿರಿಧಾನ್ಯ ಬಳಸಿರಿ ಆರೋಗ್ಯದಲ್ಲಿ ಸಿರಿವಂತರಾಗಿ, ಸಜ್ಜೆ ತಿಂದವರು ಉತ್ಸಾಹದ ಕಹಳೆ ಊದುವರು, ರಾಗಿ ತಿಂದವರು ರೋಗದಿಂದ ಮುಕ್ತರಾಗುವರು’ ಹಾಗೂ ಜಿಲ್ಲಾ ರಜತ ಮಹೋತ್ಸವದ ಸಂದೇಶ ಫಲಕಗಳನ್ನು ಹಿಡಿದು ವಿಶೇಷ ಜಾಗೃತಿ ಮೂಡಿಸಲಾಯಿತು. ನಡಿಗೆಯು ಗವಿಮಠ ರಸ್ತೆ ಮೂಲಕ ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ಜರುಗಿತು.
Gadi Kannadiga > Local News > ಕೊಪ್ಪಳ ಜಿಲ್ಲಾ ರಜತ ಮಹೋತ್ಸವ : ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಚಾಲನೆ ಸದೃಢ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯವಶ್ಯಕ : ಕರಡಿ ಸಂಗಣ್ಣ
ಕೊಪ್ಪಳ ಜಿಲ್ಲಾ ರಜತ ಮಹೋತ್ಸವ : ಸಿರಿಧಾನ್ಯಗಳ ಜಾಗೃತಿ ನಡಿಗೆಗೆ ಚಾಲನೆ ಸದೃಢ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಅತ್ಯವಶ್ಯಕ : ಕರಡಿ ಸಂಗಣ್ಣ
Suresh06/03/2023
posted on
