ಗದಗ, ನ. ೨೪ : ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಒತ್ತಾಯಪೂರ್ವಕವಾಗಿ ದುಡಿತಕ್ಕೆ ಅಥವಾ ಅನೈತಿಕ ಕೆಲಸಕ್ಕೆ ಹಚ್ಚುವುದು ಅಪರಾಧ ಕೃತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಕೆ. ಗುರುಪ್ರಸಾದ ಅವರು ಹೇಳಿದರು.
ಅವರು ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಅನುಚ್ಛೇಧ-೨೩ ರಲ್ಲಿ ಮಾನವ ಕಳ್ಳ ಸಾಗಾಣಿಕೆಯನ್ನು ನಿಷೇಧಿಸಿದೆ, ಹಾಗೆ ಮಾಡುವುದು ಅಪರಾಧ ಎಂದು ತಿಳಿಸಿದೆ. ಸಾಮಾನ್ಯವಾಗಿ ಮಹಿಳೆಯರು ಹಾಗೂ ಮಕ್ಕಳು ಮಾನವ ಕಳ್ಳ ಸಾಗಾಣಿಕೆಗೆ ಬಲಿಪಶುಗಳಾಗುತ್ತಿದ್ದಾರೆ.
ಮಾನವ ಕಳ್ಳ ಸಾಗಾಣಿಕೆಗೆ ಅನೇಕ ಮುಖಗಳಿವೆ, ಮದುವೆ, ನೌಕರಿಯ ಆಮಿಶವೊಡ್ಡಿ ಬಲವಂತವಾಗಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ, ಮಕ್ಕಳನ್ನು ಭಿಕ್ಷಾಟಣೆಗೆ ತಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಆಕರ್ಷಿಸಿ ಭಯೋತ್ಪಾಧಕ ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳಲ್ಲಿ ತಳ್ಳುತ್ತಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕು. ಅಂತಹ ಘಟನೆಗಳು ನಡೆದರೆ ಸಂಬಂಧಿಸಿದ ಅಧಿಕಾರಿಗಳಿಗೆ, ಪೊಲೀಸರಿಗೆ ತಿಳಿಸುವ ಮೂಲಕ ಅಮಾಯಕರ ಭವಿಷ್ಯವನ್ನು ಕಾಪಾಡಬೇಕು.
ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ವಿಶೇಷ ಟಾಸ್ಕ್ಫೋರ್ಸ್ ಕಮೀಟಿಯನ್ನು ರಚಿಸಲಾಗಿದ್ದು, ಈ ಮೂಲಕ ಇಂತಹ ಘಟನೆಯನ್ನು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಜನರಿಗೆ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸುತ್ತಿದೆ ಎಂದ ಅವರು, ಉಚಿತವಾಗಿ ಕಾನೂನು ಸಲಹೆ, ನೆರವಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಸಂಪರ್ಕಿಸಿ ಸಹಾಯ ಪಡೆಯಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಗ್ರಾಮದ ಮುಖಂಡ ಮನೀಶ ಲಮಾಣಿ ಅವರು ಮಾತನಾಡಿ, ಕಾನೂನು ನಮ್ಮ ನೆಲದ ಮಹತ್ವಪೂರ್ಣ ವ್ಯವಸ್ಥೆಯಾಗಿದ್ದು, ಪ್ರತಿಯೊಬ್ಬರೂ ಕಾನೂನಿಗೆ ತಲೆ ಬಾಗಬೇಕು. ಬಾಲ್ಯವಿವಾಹದಂತ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಪಾಲಕರು ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ಭಾರತಿ ತಾರಿಕೊಪ್ಪ ವಹಿಸಿದ್ದರು. ಸಮಾರಂಭದಲ್ಲಿ ತಾ.ಪಂ. ಮಾಜಿ ಸದಸ್ಯರಾದ ದೇವಪ್ಪ ಲಮಾಣಿ, ಗ್ರಾ.ಪಂ. ಸದಸ್ಯರು, ವಕೀಲರಾದ ಶ್ರೀಕಾಂತ ಗಾಳಿ, ಪಿಎಸ್ಐ ಈರಪ್ಪಾ ರಿತ್ತಿ, ಮುಖ್ಯಶಿಕ್ಷಕ ಡಿ.ಜಿ. ರಾಠೋಡ, ಗ್ರಾಮದ ಮುಖಂಡರಾದ ಈರಣ್ಣ ಕೊಡ್ಲಿವಾಡ, ಎನ್.ಎಫ್. ಪಾಟೀಲ, ಸುಧೀರ ಕುಬೇರ, ಗ್ರಾಪಂ ಪಿಡಿಒ ಆರ್.ಎಂ. ಲಮಾಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ಕೆ.ಎಸ್. ಮಾಡಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Gadi Kannadiga > State > ಛಬ್ಬಿ ಗ್ರಾಮದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಒತ್ತಾಯಪೂರ್ವಕವಾಗಿ ದುಡಿತಕ್ಕೆ ಅಥವಾ ಅನೈತಿಕ ಕೆಲಸಕ್ಕೆ ಹಚ್ಚುವುದು ಅಪರಾಧ: ನ್ಯಾ. ಕೆ. ಗುರುಪ್ರಸಾದ
ಛಬ್ಬಿ ಗ್ರಾಮದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಒತ್ತಾಯಪೂರ್ವಕವಾಗಿ ದುಡಿತಕ್ಕೆ ಅಥವಾ ಅನೈತಿಕ ಕೆಲಸಕ್ಕೆ ಹಚ್ಚುವುದು ಅಪರಾಧ: ನ್ಯಾ. ಕೆ. ಗುರುಪ್ರಸಾದ
Suresh24/11/2022
posted on
