ಸುವರ್ಣಸೌಧ, ಬೆಳಗಾವಿ, ಡಿ.೨೩ : ಸರ್ಕಾರಿ ಕಛೇರಿಗಳ ಆವರಣದಲ್ಲಿ ಹಲವಾರು ವರ್ಷಗಳಿಂದ ನಿಂತಿರುವ ನಿರುಪಯಕ್ತ ವಾಹನಗಳನ್ನು ಹರಾಜು ಹಾಕುಲು ಈಗ ಇರುವ ಪದ್ಧತಿ ಅತ್ಯಂತ ತೊಡಕಾಗಿದ್ದು ಸೂಕ್ತ ಕಾನೂನು ಮಾಡುವ ಮೂಲಕ ಸರಳೀಕರಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು
ವಿಧಾನಸಭೆಯ ಕಲಾಪದಲ್ಲಿಂದು ಶಾಸಕ ಬಿ. ಹರ್ಷವರ್ಧನ್ ಅವರು ಗಮನ ಸೆಳೆಯವ ಸೂಚನೆ ಮಂಡಿಸಿ, ರಾಜ್ಯದಲ್ಲಿನ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸಾರಿಗೆ ಇಲಾಖೆಯಲ್ಲಿ ಬಳಕೆಯಾಗದ, ಹಳೆಯದಾದ ನಾಲ್ಕು ಚಕ್ರದ ವಾಹನ ಮತ್ತು ಬಸ್ಸುಗಳನ್ನು ಪರಿಶೀಲಿಸಿ, ನಿರುಪಯುಕ್ತಗೊಳಿಸಿ ಹರಾಜಿನ ಮೂಲಕ ವಿಲೇವಾರಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಶಾಸಕರ ಭವನದ ಮುಂದೆ ನಿಂತಿರುವ ನಿರುಪಯುಕ್ತ ವಾಹನಗಳು ಬೇಗನೆ ಹರಾಜಾಗುತ್ತವೆ, ಆದರೆ ಇತರೆ ಸರ್ಕಾರಿ ಕಛೇರಿಗಳ ಮುಂದೆ ನಿಂತಿರುವ ನಿರುಪಯುಕ್ತ ವಾಹನಗಳು ಏಕೆ ಬೇಗ ಹರಾಜಾಗುವುದಿಲ್ಲ ಎಂಬ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಯಾವುದೇ ವಾಹನ ಹರಾಜು ಹಾಕಲು ವಾಹನ ೧೫ ವರ್ಷ ಪೂರೈಸಿರಬೇಕು, ನಿಗದಿತ ಕಿ.ಮೀ. ಕ್ರಮಿಸಿರಬೇಕೆಂಬ ನಿಯಮ ಕಠಿಣವಾಗಿದ್ದು, ೧೫ ವರ್ಷ ಪೂರೈಸಿರುವ ವಾಹನಗಳನ್ನು ಅನ್ಫಿಟ್ ಎಂದು ಪರಿಗಣಿಸಿ ಹೊಸ ವಾಹನ ಕೊಳ್ಳಲು ರಿಯಾಯಿತಿ ನೀಡಲು ಚಿಂತಿಸಲಾಗುವುದೆಂದರು.
ಶಾಸಕರಾದ ಯು.ಟಿ. ಖಾದರ್ ಮಾತನಾಡಿ, ಸಾಕಷ್ಟು ವಾಹನಗಳು ಹಲವಾರು ವರ್ಷಗಳಿಂದ ಪೊಲೀಸ್ ಠಾಣೆಗಳ ಆವರಣದಲ್ಲಿ ನಿರುಪಯುಕ್ತವಾಗಿ ನಿಂತಿವೆ, ಅಂತಹ ವಾಹನಗಳನ್ನು ನಿಲ್ಲಿಸಲು ೨ ಎಕರೆಯಷ್ಟು ಜಾಗ ಗುರುತಿಸಿ ಅಲ್ಲಿ ನಿಲ್ಲಿಸಬೇಕು ಎಂದಾಗ ಮಾಧುಸ್ವಾಮಿಯವರು ಪ್ರತಿಕ್ರಿಯಿಸಿ,ಅಂತಹ ವಾಹನಗಳ ಮೇಲೆ ವಿವಿಧ ಪ್ರಕರಣಗಳಿರುತ್ತವೆ,ಅವುಗಳನ್ನು ಹಾಗೆಲ್ಲ ತೆರವುಗೊಳಿಸಲು ಬರುವುದಿಲ್ಲ, ನ್ಯಾಯಾಲಯದ ಅನುಮತಿ ಬೇಕು. ಪೊಲೀಸ್ ಠಾಣೆ ಆವರಣದಲ್ಲಿಯೇ ವಾಹನಗಳ ಬಿಡಿಭಾಗಗಳನ್ನು ದೋಚಿದ ಉದಾಹರಣೆಗಳಿವೆ. ಇನ್ನು ಹೊರಭಾಗದಲ್ಲಿ ನಿಲ್ಲಿಸಿದರೆ ವಾಹನಗಳ ಸುರಕ್ಷತೆ ಕಷ್ಟ ಎಂದರು.
ಎಷ್ಟೋ ಪ್ರಕರಣಗಳಲ್ಲಿ ಅಕ್ರಮ ಮದ್ಯ, ಮರ,ಮಟ್ಟುಗಳ ಸಾಗಣೆ ಪ್ರಕರಣಗಳಲ್ಲಿ ವಾಹನದ ಮಾಲೀಕರೇ ಪತ್ತೆಯಾಗಿರುವುದಿಲ್ಲ, ಅಬಕಾರಿ ಇಲಾಖೆಯವರು ಮಾತ್ರ ಸರಕು ಸಮೇತ ವಾಹನ ಹರಾಜು ಹಾಕುತ್ತಾರೆ ಎಂದರು.
ಶಾಸಕರಾದ ಸೌಮ್ಯ ರಡ್ಡಿ ಅವರು ಮಾತನಾಡಿ ನಮ್ಮಲ್ಲಿ ೩ ನೇ ಮಹಾಯುದ್ಧ ನಡೆದರೆ ಅದು,ಟ್ರಾಫಿಕ್ ಹಾಗೂ ಪಾರ್ಕಿಂಗ್ ಕಾರಣಗಳಿಗಾಗಿ ನಡೆಯಬಹುದು ಎಂದರು.
ಶಾಸಕರಾದ ಕೆ.ಜೆ.ಜಾರ್ಜ್ ಮಾತನಾಡಿ ಬೆಂಗಳೂರು ಹೊರವಲಯದಲ್ಲಿ ೫೦ ರಿಂದ ೧೦೦ ಎಕರೆ ಜಾಗದಲ್ಲಿ ಸ್ಕ್ರಾö್ಯಪಿಂಗ್ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಆದಾಯ ಬರುತ್ತದೆ ಎಂದರು.
Gadi Kannadiga > Local News > ನಿರುಪಯುಕ್ತ ವಾಹನಗಳ ಹರಾಜಿಗೆ ಸೂಕ್ತ ಕಾನೂನು : ಮಾಧುಸ್ವಾಮಿ