ಬೆಳಗಾವಿ ೭- ಯಾವುದೇ ವಿದ್ಯಾರ್ಥಿ ಅಭ್ಯಾಸದತ್ತ ಗಮನ ಕೊಡದಿದ್ದಾಗ ಆತ ಜೀವದಲ್ಲಿ ಎಲ್ಲ ದಾರಿ ತಪ್ಪುವನೋ, ಹಾಳಾಗುವುನೋ ಎಂಬ ನೋವು ಪಾಲಕರಿಗಿಂತ ಹೆಚ್ಚು ನನ್ನನ್ನು ಕಾಡುತ್ತಿತ್ತು; ಮನಸ್ಸು ಚಿಂತಿಸುತ್ತಿತ್ತು. ಅದರಂತೆ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಿದಾಗ ಸಂತೋಷದಿಂದ ಕುಣಿದಾಡುತ್ತಿತ್ತು ಎಂದು ತಿಲಕವಾಡಿಯ ಸ್ವಾದ್ಯಾಯ ವಿದ್ಯಾ ಮಂದಿರ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ವಿ. ಜಿ. ಕುಲಕರ್ಣಿಯವರು ಇಂದಿಲ್ಲಿ ಹೇಳಿದರು.
ಶಿಕ್ಷಕ ಕುಲಕರ್ಣಿಯವರು ಇಂಗ್ಲೀಷ ಹಾಗೂ ಕನ್ನಡ ಭಾಷೆಯ ಶಿಕ್ಷಕರೆಂದು ಸೇವೆ ಸಲ್ಲಿಸಿ ನಿವೃತ್ತಿ ಜೀವನವನ್ನು ಈಗ ಬೆಳಗಾವಿಯ ವಿನಾಯಕ ನಗರದಲ್ಲಿ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೀತಿ ಪಾತ್ರರಾಗಿರುವ ಕುಲಕರ್ಣಿಯವರಿಗೀಗ ೮೪ ವರ್ಷ. ಇದೇ ದಿ. ೫ ರಂದು ಶಿಕ್ಷಕ ದಿನಾಚರಣೆಯಂದು ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇವರನ್ನು ಭೇಟಿಯಾಗಿ ಸನ್ಮಾನಿಸಿ ಗೌರವಿಸಿ ಗುರುಗಳ ಆಶಿರ್ವಾದ ಪಡೆದುಕೊಂಡರು ಈ ಸಂದರ್ಭದಲ್ಲಿ ಇವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ ಮಾತನಾಡುತ್ತ ಕುಲಕರ್ಣಿಯವರು ನನ್ನ ವಿದ್ಯಾರ್ಥಿಗಳಿಂದು ದೇಶ, ವಿದೇಶಗಳ ತುಂಬೆಲ್ಲ ವೈದ್ಯರು, ಇಂಜನಿಯರರು, ವಿಜ್ಞಾನಿಗಳು, ಕಲಾವಿದರು ಹೀಗೆ ಉನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯವಾಗಿ ನನ್ನ ಎಲ್ಲ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯುತ್ತಿರುವುದು ನನಗೆ ತುಂಬ ಅಭಿಮಾನ ತರುತ್ತದೆ, ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.
ವಿದ್ಯಾರ್ಥಿ ಸಂಜೀವ ಬಾ. ಕುಲಕರ್ಣಿ ಗುರುಗಳಿಗೆ ಶಾಲು ಹೊದಿಸಿ, ಮಾಲೆ ಹಾಕಿ, ಫಲಪುಷ್ಪ ನೀಡಿ ಗೌರವಿಸಿ ಮಾತನಾಡುತ್ತ ಇಂದಿನ ನನ್ನ ಒಳ್ಳೆಯ ಜೀವನಕ್ಕೆ ನನ್ನ ಗುರುಗಳಾದ ವಿ. ಜಿ. ಕುಲಕರ್ಣಿಯವರೇ ಕಾರಣ. ಅವರು ಹಾಕಿಕೊಟ್ಟಿರುವ ಆದರ್ಶ ಜೀವನದ ಮಾರ್ಗವನ್ನು ನನ್ನ ಮಕ್ಕಳು, ಮಿತ್ರರಲ್ಲಿ ಹೇಳಿಕೊಳ್ಳುತ್ತಿರುತ್ತೇನೆ. ಗುರುಗಳನ್ನು ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಳ್ಳುತ್ತಾ ಇರುತ್ತೇನೆ ಎಂದು ಹೇಳಿದರು.