ಬೆಳಗಾವಿ: ನನ್ನ ಹಾಡುಗಳೇ ನನ್ನ ಮಾತುಗಳು ಎನ್ನುವ ಮೂಲಕ ಭಾಷಣ ಮಾಡದೆ ರಂಗಗೀತೆಗಳ ಹಾಡಲು ಆರಂಭಿಸಿದರು ಹಿರಿಯ ಕಲಾವಿದೆ ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರು
ಚಲನಚಿತ್ರದ ಹಾಡೊಂದನ್ನು ಹಾಡುವಂತೆ ಒತ್ತಾಯಿಸಿದ ಪ್ರೇಕ್ಷಕರಿಗೆ ಉತ್ತರಿಸಿದ ಅವರು ‘ರಂಗಗೀತೆ ಎಂದರೆ ಭಾವಗೀತೆ, ಭಕ್ತಿಗೀತೆ ಮತ್ತು ಚಲನಚಿತ್ರ ಗೀತೆಗಳಲ್ಲ. ಭಾವಗೀತೆಯಲ್ಲಿ ವಿರಹ, ಪ್ರೇಮ ಇದ್ದರೆ, ಭಕ್ತಿಗೀತೆಗಳಲ್ಲಿ ಭಕ್ತಿ ಇರುತ್ತದೆ. ಚಲನಚಿತ್ರ ಗೀತೆಗಳಲ್ಲಿ ಯಾವುದೇ ಅಂಶ ಇರಬಹುದು. ಆದರೆ, ರಂಗಗೀತೆ ಗಳಲ್ಲಿ ನವರಸಗಳಿವೆ ಇಲ್ಲಿ ಬಳಸುವ ತಬಲ ಮತ್ತು ಪೇಟಿಗಳು ಚಿತ್ರಗೀತೆಗಳ ಸ್ನೇಹಿತರಲ್ಲ ಹಿನ್ನೆಲೆ ಸಂಗೀತ ಇರುವುದಿಲ್ಲ. ಇವುಗಳನ್ನು ಕೇಳಿ ಆನಂದಿಸಿ’ ಎಂದರು.
ಬೆಳಗಾವಿಯ ನೆಹರೂ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ರಂಗ ಸಂಭ್ರಮ’ ಕಾರ್ಯಕ್ರಮದಲ್ಲಿ ರಂಗ ಕಲಾವಿದೆ ಬಿ.ಜಯಶ್ರೀ ಹಾಗೂ ಅವರ ತಂಡದವರು ಪ್ರಸ್ತುತಪಡಿಸಿದ ಪ್ರದರ್ಶನ ರಂಗಪ್ರಿಯರ, ಕಲಾ ಪ್ರೇಮಿಗಳ ಮನಸೂರಿಗೊಂಡಿತು.
ನಾನು ನಮ್ಮವರೊಂದಿಗೆ ಫೌಂಡೇಷನ್, ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ ಹಾಗೂ ಕನ್ನಡ ಭವನ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿಯಷ್ಟೇ ಅಲ್ಲದೆ ಪರ ಊರುಗಳಿಂದಲೂ ಜನ ಆಗಮಿಸಿದ್ದರು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಆರಂಭದಲ್ಲಿ ‘ಶ್ರೀಗಣರಾಯ ಪಾರ್ವತಿ ಪ್ರಣಯ… ಶರಣು ಶರಣು ನಿನಗ…’ ಎನ್ನುವ ಗೀತೆ ಮೂಲಕ ಗಾಯನ ಆರಂಭಿಸಿದರು.
‘ಶರಣು ಹೇಳೇವ್ರಿ ಸ್ವಾಮಿ ನಾವು ನಿಮಗ… ಸದ್ದು ಗದ್ದಲ ಮಾಡಬ್ಯಾಡ್ರಿ ಆಟದೊಳಗ…’ ಗೀತೆಯಂತೂ ಸಭಿಕರನ್ನು ಸಂಭ್ರಮದಲ್ಲಿ ತೇಲಿಸಿತು. ಸಾಹಿತಿಗಳಾದ ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಎಚ್.ಎಸ್.ವೆಂಕಟೇಶಮೂರ್ತಿ ಅವರು ರಚಿಸಿದ ನಾಟಕಗಳ ಗೀತೆಗಳು, ಕೃಷ್ಣ–ರಾಧೆಯ ಪ್ರಣಯ ವರ್ಣಿಸುವ ಅಷ್ಟಪದಿ ಗೀತೆ ಸೆಳೆದವು.
ಬೆಳಗಾವಿ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಇದ್ದದೊಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಡೀ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಭಾಷಣ ಮಾಡದೆ ಕೇವಲ ರಂಗಗೀತೆಗಳಿಗೆ ಸಮಯ ಮೀಸಲಿಟ್ಟದ್ದು ಈ ಕಾರ್ಯಕ್ರಮದ ವಿಶೇಷತೆ. ಮುಖ್ಯವೆಂದರೆ ವೇದಿಕೆಯ ಮೇಲೆ ಕುರ್ಚಿಗಳೇ ಇರಲಿಲ್ಲ, ಉದ್ಘಾಟನಾ ದೀಪ ಬೆಳಗಲಷ್ಟೇ ಅತಿಥಿಗಳು ವೇದಿಕೆ ಏರಿದ್ದರು.
ಎರಡು ಗಂಟೆ ನಿರಂತರವಾಗಿ ಹೊರಹೊಮ್ಮಿದ ಗೀತೆಗಳು ಪ್ರೇಕ್ಷಕರು ಕುಣಿದು ಕುಪ್ಪಳಿಸುವಂತೆ ಮಾಡಿದವು ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಸಭಾಂಗಣದಲ್ಲಿ ಕುಳಿತುಕೊಳ್ಳಲು ಆಸನ ಸಿಗದೇ ನೆಲದ ಮೇಲೆ ತಳ ಸಿಕ್ಕಲ್ಲೆಲ್ಲ ಜನ ಕುಳಿತುಕೊಂಡಿದ್ದರು. ಸುಭಾಂಗಣದ ಹೊರನಿಂತಿದ್ದ ಜನರೂ ಜಯಶ್ರೀ ಅವರ ಗಾಯನ ಆಲಿಸಿ ಖುಷಿಪಟ್ಟರು.
‘ಆಹಾ ಮಮತೆ… ಮಾತೆ…’ ಎನ್ನುವ ರಂಗಗೀತೆ ಹಾಡುವ ಮೂಲಕ ರಂಗಭೂಮಿ ಗಾಯಕ ರಾಜಪ್ರಭು ಧೋತ್ರೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಅವರ ಸುಮಧುರ ಕಂಠಕ್ಕೆ ಜನರು ತಲೆದೂಗಿದರು.
ಸ್ಥಳೀಯ ತಂಡಗಳಿಂದಲೂ ಪ್ರದರ್ಶನ: ವಾಗ್ದೇವಿ ಸಂಗೀತ ಶಾಲೆ, ನಾನು ನಮ್ಮವರೊಂದಿಗೆ ಫೌಂಡೇಷನ್, ಉಮಾ ಸಂಗೀತಾ ಪ್ರತಿಷ್ಠಾನ, ಸ್ವರಸಾಧನ ಸಂಗೀತ ಶಾಲೆ, ಸುಸ್ವರ ಸಂಗೀತ ಶಾಲೆ, ಭಾರತೀಯ ಗಾಯನ ಸಮಾಜ, ಸುರೇಶ ಚಂದರಗಿ ಮತ್ತು ಖುಷಿ ಢವಳಿ ತಂಡದವರು ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿ ಸಭಿಕರನ್ನು ರಂಜಿಸಿದರು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಜಂಟಿನಿರ್ದೇಶಕ ಕೆ.ಎಚ್.ಚನ್ನೂರ, ರಂಗ ಚಟುವಟಿಕೆಗಳ ಪೋಷಕ ರಮೇಶ ಜಂಗಲ್, ಭರತೇಶ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ನಾನು ನನ್ನ ಫೌಂಡೇಷನ್ನ ಸರ್ವಮಂಗಳಾ ಅರಳಿಮಟ್ಟಿ, ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲ, ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕರಿಗೊನ್ನವರ(ಚಂದರಗಿ) ಉಪಸ್ಥಿತರಿದ್ದರು.