ಬೆಳಗಾವಿ:- “ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ರಾಜಕುಮಾರ ಕುಟುಂಬದ ಕೊಡುಗೆ ಅಪ್ರತಿಮವಾದುದು. ರಂಗಭೂಮಿ ಹಾಗೂ ಚಲನಚಿತ್ರ ರಂಗಗಳ ಸಮನ್ವಯದಂತಿದ್ದ ಪದ್ಮಭೂಷಣ ಡಾ. ರಾಜಕುಮಾರ ಇಂದಿನ ಕಲಾವಿದರಿಗೆ ಮಾದರಿಯಾಗಿದ್ದಾರೆ” ಎಂದು ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಬಿಂಗೆ ಅಭಿಪ್ರಾಯ ಪಟ್ಟರು.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಬೆಳಗಾವಿಯ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರತ್ನದ್ವಯರಾದ ಡಾ. ರಾಜಕುಮಾರ ಹಾಗೂ ಡಾ. ಪುನೀತರಾಜಕುಮಾರ ಅವರ ಚಿತ್ರಗಳ ಗೀತಗಾಯನ ಹಾಗೂ ಬೆಳ್ಳಿಚುಕ್ಕಿಯ ಮಹಿಳಾ ವೇದಿಕೆ, ಮಕ್ಕಳ ವೇದಿಕೆ ಹಾಗೂ ಹಿರಿಯರ ವೇದಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ” ನಮ್ಮ ನಾಡಿನ ಇತಿಹಾಸದ ವ್ಯಕ್ತಿಗಳೆಂದರೆ ಡಾ. ರಾಜಕುಮಾರ ಅವರ ಐತಿಹಾಸಿಕ ಚಿತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಅನೇಕ ಸಾಮಾಜಿಕ ಬದಲಾವಣೆಗಳಿಗೆ ರಾಜಣ್ಣನ ಚಿತ್ರಗಳು ಪ್ರೇರಣೆಯಾಗಿದ್ದು ಈಗ ಇತಿಹಾಸ. ಅವರ ದಾರಿಯಲ್ಲೇ ಸಾಗಿದ ಪುನೀತರಾಜಕುಮಾರ ಅವರು ಮನರಂಜನೆಯೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಸಿನೆಮಾ ಮಾಡುವ ಮೂಲಕ ಹೆಚ್ಚಾಗಿ ಯುವಜನರ ಮನ ಗೆದ್ದಿದ್ದಾರೆ. ಅವರ ಸಾಮಾಜಿಕ ಕಾಳಜಿ ನಮಗೆಲ್ಲ ಮಾದರಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ಅಭಿನಯಿಸಿದ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ಆನಂದ ಆನಂದ ಜಾಹೀರಾತು ಪ್ರೇಕ್ಷಕರ ಮನ ಸೆಳೆಯಿತು.
ಸಂತೋಷ ತಾಸಗಾನ್ವಕರ ಹಾಗೂ ನಂದಿತಾ ಮಠದ ಅವರು ಹಾಡಿದಶಿವಪ್ಪಾ ಕಾಯೋ ತಂದೆ, ನಾದಮಯ ಹಾಗೂ ಕಾಣದಂತೆ ಮಾಯವಾದನು ಗೀತೆಗಳು ಗಮನ ಸೆಳೆದವು.
ಬೆಳ್ಳಿಚುಕ್ಕಿ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಹಾಗೂ ಅರವಿಂದ ಪಾಟೀಲ ಅವರು ಅಭಿನಯಿಸಿದ ಕವಿರತ್ನ ಕಾಳಿದಾಸ ಚಿತ್ರದ ಪ್ರಿಯತಮ ಗೀತೆಗೆ ಪ್ರೇಕ್ಷಕರ ಮನಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಅರವಿಂದ ಪಾಟೀಲ, ಡಾ. ಹೆಚ್. ಬಿ.ರಾಜಶೇಖರ, ಮದನಕುಮಾರ ಭೈರಪ್ಪನವರ, ಬಿ. ಎಸ್. ಹಿರೇಮಠ, ಬಸವರಾಜ ಕುಂಬಾರ, ಅಕ್ಷಯ, ವಿದ್ಯಾ, ವಿಜೀತ, ಪೂಜಾ, ವೇದಾಂತ ಉಪಸ್ಥಿತರಿದ್ದರು. ಬೆಳ್ಳಿಚುಕ್ಕಿಯ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.
Gadi Kannadiga > Local News > ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ರಾಜಕುಮಾರ ಕುಟುಂಬದ ಕೊಡುಗೆ ಅಪ್ರತಿಮ : ಬಿಂಗೆ