ವಿಜೃಂಭಣೆಯಿಂದ ಜರುಗಿದ ಕಪ್ಪತಗುಡ್ಡ ಶ್ರೀ ನಂದಿವೇರಿ ಬಸವಣ್ಣನ ರಥೋತ್ಸವ

Murugesh Shivapuji
ವಿಜೃಂಭಣೆಯಿಂದ ಜರುಗಿದ ಕಪ್ಪತಗುಡ್ಡ ಶ್ರೀ ನಂದಿವೇರಿ ಬಸವಣ್ಣನ ರಥೋತ್ಸವ
WhatsApp Group Join Now

ಗದಗ ; ಗದಗ ಜಿಲ್ಲೆಯ ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಬಸವಣ್ಣನ ರಥೋತ್ಸವ, ಪಾಲಕಿ ಸೇವೆ, ಪರಿಸರೋತ್ಸವವು ಯಶಸ್ವಿಯಾಗಿ ಜರುಗಿದವು.

ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತಸಾಗರದ ಜಯಘೋಷಗಳೊಂದಿಗೆ ಹಸಿರು ಕಾನನದ ಮಧ್ಯೆ ಯಶಸ್ವಿಯಾಗಿ ಜರುಗಿತು.

ಗದಗ, ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಕಲಬುರ್ಗಿ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಭಕ್ತಿಪರಾಕಾಷ್ಠೆಯನ್ನು ತಲುಪಿ ಪಾಲ್ಗೊಂಡಿದ್ದುದು ನೋಡಗರ ಹೃನ್ಮನಗಳನ್ನು ಗೆಲ್ಲುವಲ್ಲಿ ಸಫಲವಾಯಿತು.

ಭಜನೆ, ಕರಡಿಮಜಲಿನ ಸುಶ್ರಾವ್ಯ ಇಂಪಿನ ಕಂಪು ಇಡೀ ಕಾನನದಲ್ಲಿ ರಣರಣಿಸಿ ಶಿವ ಪಾರ್ವತಿಯರನ್ನು ಹೊತ್ತು ಕರೆತಂದ ನಂದಿವೇರಿ ಬಸವಣ್ಣನ ಈ ಪುಣ್ಯಕ್ಷೇತ್ರದಲ್ಲಿ ಆಗಮಿಸಿದ ಭಕ್ತಗಣವೆಲ್ಲವೂ ಪುಳಕಿತಗೊಂಡಿತು.

ಪರಿಸರೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ನಂದಿವೇರಿ ಸಂಸ್ಥಾನ ಮಠವು ಭಕ್ತರ ಹಾಗೂ ಪರಿಸರಾಸಕ್ತರ ಸಹಾಯ ಸಹಕಾರದೊಂದಿಗೆ ಹಮ್ಮಿಕೊಂಡ ಹಾಗೂ ಅನುಷ್ಠಾನಗೊಳಿಸಿದ ಚಟುವಟಿಕೆಗಳ ಕುರಿತು ಭಾಲಚಂದ್ರ ಜಾಬಶೆಟ್ಟಿ ವಿವರಿಸಿದರು.

ಕಪ್ಪತಗುಡ್ಡ ಉತ್ಸವ, ಕಪ್ಪತಗುಡ್ಡ ಪ್ರದಕ್ಷಿಣೆ, ಸಾವಯವ, ನೈಸರ್ಗಿಕ, ಮತ್ತು ಪಾರಂಪರಿಕ, ಹಾಗೂ ಗೋ ಮತ್ತು ನಂದಿ ಆಧಾರಿತ ಕೃಷಿ, ಎರೆಹುಳು ಬಿತ್ತನೆ, ಭೂದೇವಿ ಹಾಗೂ ವನದೇವಿಗಳಿಗೆ ಬೀಜದುಂಡೆ ಚರಗ ನಮನ, ಗೋಕೃಪಾಮೃತ ಹಾಗೂ ನಂದಿವೇರಿ ಸೂಕ್ಷ್ಮಾಮೃತ, ಹುಬ್ಬಳ್ಳಿಯಲ್ಲಿ ಆಯೋಜಿಸಿದ ಔಷಧೀಯ ಸಸ್ಯಗಳ ರಾಜ್ಯಮಟ್ಟ ಕಾರ್ಯಾಗಾರ, ಪ್ರತಿ ತಿಂಗಳ ಎರಡನೇ ರವಿವಾರ ಆಯೋಜಿಸುತ್ತಿರುವ ಕಪ್ಪತಗುಡ್ಡ ಚಾರಣ ಹಾಗೂ ಸಸ್ಯಾನುಭವ, ಸಾಹಿತ್ಯಾವಲೋಕನ, ಕವಿಗೋಷ್ಠಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಠದ ಪರಿಸರ ಪೂರಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭ್ಯುದಯದ ಕೆಲಸ ಕಾರ್ಯಗಳಲ್ಲಿ ತನು ಮನ ಧನಗಳಿಂದ ಸಹಾಯ ಸಹಕಾರ ನೀಡಿದ ಎಲ್ಲ ಮಹನೀಯರ ಉಪಕಾರ ಸ್ಮರಿಸಿದರು.

ನಂದಿವೇರಿ ಬಸವಣ್ಣನ ಎದುರಿನಲ್ಲಿನ ಶರಣ ಸಂಗಮದ ಬಂಗಾರ ಕೊಳದ ಉದ್ಭವ ನಂದೀ ತೀರ್ಥೋದ್ಭವದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗಿದ್ದು, ಈಗಾಗಲೇ ಅನೇಕ ದಾನಿಗಳು ತಮ್ಮ ಭಕ್ತಿಸೇವೆ ಸಲ್ಲಿಸಿದ್ದು ಇನ್ನೂ ಹೆಚ್ಚಿನ ಭಕ್ಕಿ ಸೇವೆ ಹರಿದು ಬರಲಿದೆಯೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಬರುವ ನವಂಬರ ತಿಂಗಳ ಎರಡನೇ ರವಿವಾರ ದಿ.10/11/2024 ರಂದು ಜರುಗುವ ರಾಜ್ಯಮಟ್ಟದ ಕವಿಗೋಷ್ಠಿ ಸಂದರ್ಭದಲ್ಲಿ ನಂದಿವೇರಿ ತೀರ್ಥೋದ್ಭವವು ನಂದಿಮುಖಿಯಾಗಿ ನಿರಂತರ ಪ್ರವಹಿಸುವ ಪ್ರಕ್ರಿಯೆಯು ಲೋಕಾರ್ಪಣೆಗೊಳ್ಳಲಿದೆ.
ಈ ಉದ್ಭವ ನಂದೀತಿರ್ಥದ ಪ್ರೋಕ್ಷಣೆ ಮಾಡಿಕೊಂಡು ಶ್ರೀ ನಂದಿವೇರಿ ಬಸವಣ್ಣನ ದರ್ಶನಾಶೀರ್ವಾದ ಪಡೆಯುವದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುವವೆಂಬ ಪ್ರತೀತಿಯಿದೆಯೆಂದೂ ಸಹ ತಿಳಿಸಿದರು.

ಈ ಸಂದರ್ಭದಲ್ಲಿ ಅನೇಕ ಗಣ್ಯರು ತಮ್ಮ ನುಡಿನಮನಗಳನ್ನು ಸಲ್ಲಿಸಿದರು.
ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ನೀಡಿದ ಆಶೀರ್ವಚನದಲ್ಲಿ ಕರ್ನಾಟಕದ ಏಳು ಕೋಟಿ ಜನರು ಕಪ್ಪತಗುಡ್ಡದ ಜೊತೆಗೆ ಭಾವಬಂಧ ಬೆಸೆದು ಇಲ್ಲಿ ಅಮೂಲ್ಯವಾದ ಔಷಧೀಯ ಸಸ್ಯಗಳನ್ನು ಉಳಿಸಿ, ಬಳಸಿ, ಬೆಳೆಸುವುದರ ಮೂಲಕ ಈ ಅಪರೂಪದ ಸಸ್ಯಕಾಶಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಇಂದಿನ ಅವಶ್ಯಕತೆಯಾಗಿದೆಯೆಂದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್.ಪಾಟೀಲರು ಸರ್ವಾಲಂಕೃತ ನಂದಿವೇರಿ ಬಸವಣ್ಣನ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು

ಅನೇಕ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು

WhatsApp Group Join Now
Telegram Group Join Now
Share This Article
error: Content is protected !!