This is the title of the web page
This is the title of the web page

Please assign a menu to the primary menu location under menu

Local News

ಸಿ ಮತ್ತು ಡಿ ಗುಂಪಿನ ಹುದ್ದೆಗಳು ಕನ್ನಡಿಗರಿಗೆ ಮೀಸಲು; ಖಾಸಗಿ ನಿರ್ಣಯ ಅಂಗೀಕಾರ


ಬೆಳಗಾವಿ ಸುವರ್ಣಸೌಧ ಡಿ.೨೩: ರಾಜ್ಯದಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ `ಸಿ’ ಹಾಗೂ `ಡಿ’ ವೃಂದದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಾಗಿರಿಸಬೇಕು ಎಂದು ಸದಸ್ಯ ಯು.ಬಿ. ವೆಂಕಟೇಶ ಅವರು ಮಂಡಿಸಿದ ಖಾಸಗಿ ನಿರ್ಣಯಕ್ಕೆ ಶುಕ್ರವಾರ ವಿಧಾನಪರಿಷತ್ತಿನಲ್ಲಿ ಅಂಗೀಕಾರ ದೊರಕಿತು.
ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ ಎನ್ನುವ ಆಶಯದ ಭಾಗವಾಗಿ ಈ ವಿಚಾರ ಮಂಡಿಸಿದ ಯು.ಬಿ. ವೆಂಕಟೇಶ, ಸ್ವಾತಂತ್ರ‍್ಯ ಬಂದು ೭೫ ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ೧೯೪೭ ರಿಂದ ಅಧಿಕಾರಕ್ಕೆ ಬಂದಂತಹ ಕೇಂದ್ರ ಸರ್ಕಾರಗಳು, ಅನೇಕ ರಾಜ್ಯಗಳಲ್ಲಿ ಹಲವಾರು ಪ್ರಕಾರಗಳಲ್ಲಿ ಉದ್ಯಮಗಳನ್ನು ಬ್ಯಾಂಕುಗಳನ್ನು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿವೆ, ಇವುಗಳಲ್ಲಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ಕೊಡುವ ಸಂದರ್ಭದಲ್ಲಿ ಸ್ಥಳೀಯ ಭಾಷೆ ಮಾತನಾಡುವ ಆಯಾಯ ರಾಜ್ಯದ ಜನರಿಗೆ ತಾಂತ್ರಿಕೇತರ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಮೀಸಲಿಡುವ ಯಾವುದೇ ರೀತಿಯ ನಿಯಮಗಳನ್ನು ಕಾನೂನಾತ್ಮಕವಾಗಿ ರೂಪಿಸದಿರುವ ಕಾರಣದಿಂದ ಕನ್ನಡಿಗರು ಉದ್ಯೋಗ ವಂಚಿತರಾಗುವಂತೆ ಮಾಡಿದೆ ಎಂದರು.ಬಹುತೇಕ ಕೇಂದ್ರ ಸರ್ಕಾರದ ಹುದ್ದೆಗಳು ನಮ್ಮ ಕರ್ನಾಟಕ ರಾಜ್ಯದಲ್ಲಂತೂ ಅನ್ಯ ಭಾಷಿಗರ ತಾಣವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರ ಉಭಯ ಸದನಗಳಲ್ಲಿ ಒಂದು ನಿರ್ಣಯವನ್ನು ಸಂವಿಧಾನದ ತಿದ್ದುಪಡಿಗಾಗಿ ಮಂಡಿಸಿ ಅನುಮೋದಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ವೆಂಕಟೇಶ ವಿಷಯ ಮಂಡಿಸಿದರು.
ಇಂತಹ ನಿರ್ಣಯಗಳು ದೇಶದ ಎಲ್ಲಾ ರಾಜ್ಯಗಳಲ್ಲೂ ಆಯಾಯ ಸದನದಲ್ಲಿ ಮಂಡಿಸಲು, ನಾವು ಮಾದರಿಯಾಗಬೇಕು. ಎಲ್ಲಾ ರಾಜ್ಯಗಳಿಂದ ಒತ್ತಡ ತರುವುದರ ಜೊತೆಗೆ ನಮ್ಮ ರಾಜ್ಯದ ಲೋಕಸಭೆ ಮತ್ತು ರಾಜ್ಯ ಸಭೆಯ ಸದಸ್ಯರುಗಳು ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಆಯಾಯ ರಾಜ್ಯದವರಿಗೆ ಶೇ.೮೦ ರಷ್ಟು ಮೀಸಲಿಡುವ ಉದ್ದೇಶಕ್ಕಾಗಿ ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಬೇಕು ಎಂಬ ವಿಷಯ ಸಹ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಸಂವಿಧಾನ ತಿದ್ದುಪಡಿಯಾಗದ ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕನ್ನಡಿಗರಿಗೆ ಹುದ್ದೆ ಎಂಬ ನಮ್ಮ ಎಲ್ಲಾ ವರದಿಗಳು ಕನ್ನಡ ಪರ ಹೋರಾಟಗಾರರ ಒತ್ತಾಯಗಳು ಕಾನೂನಾತ್ಮಕವಾಗಿ ಪರಿಣಾಮವನ್ನು ಬೀರುವುದು ಸಾಧ್ಯವಾಗದು ಎಂಬ ಅಭಿಪ್ರಾಯವನ್ನು ವೆಂಕಟೇಶ ಸದನದಲ್ಲಿ ವ್ಯಕ್ತಪಡಿಸಿದರು.
೧೯೮೩ರಲ್ಲಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರು ಕೇಂದ್ರ ಸರ್ಕಾರದಲ್ಲಿನ ಹುದ್ದೆಗಳಲ್ಲಿ ಶೇ.೮೦ ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವ ಸಂಬಂಧ ವರದಿಯನ್ನು ನೀಡಲು ಡಾ. ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದರು. ಡಾ.ಮಹಿಷಿ ವರದಿ ಇಲ್ಲಿಯವರೆಗೂ ಅನುಷ್ಠಾನಗೊಂಡಿಲ್ಲ, ಹಲವಾರು ಬಾರಿ ಪರಿಸ್ಥಿತಿಗೆ ಅನುಗುಣವಾಗಿ ಮಹಿಷಿ ವರದಿ ಪರಿಷ್ಕರಣೆಯೂ ಆಗಿದೆ. ಆದರೆ, ಇಲ್ಲಿಯವರೆಗೂ ಸರೋಜಿನಿ ಮಹಿಷಿ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಇರುವುದು ಮಾತ್ರ ಸೋಜಿಗದ ಸಂಗತಿ ಎಂದು ವೆಂಕಟೇಶ ವಿಶ್ಲೇಷಿಸಿದರು.
ಉತ್ತರ ಭಾರತೀಯರೇ ಬ್ಯಾಂಕುಗಳಲ್ಲಿ ಅಧಿಕವಾಗಿದ್ದಾರೆ, ಹೀಗಾಗಿ ಕನ್ನಡಿಗರಿಗೆ ವ್ಯವಹಾರ ನಿರ್ವಹಣೆ ಕಷ್ಟದಾಯಕವಾಗಿ ಪರಿಗಣಿಸಿದೆ, ಗ್ರಾಹಕರಿಗೆ ಇದರಿಂದ ಸಾಕಷ್ಟು ಕಿರಿಕಿರಿ ಯಾಗುತ್ತಿದೆ. ಅನಿವಾರ್ಯವಾಗಿ ಹಿಂದಿ ಭಾಷೆಯನ್ನು ಮಾತನಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ ಎಂಬ ಕನ್ನಡಗಿರ ಸಮಸ್ಯೆಯನ್ನು ವೆಂಕಟೇಶ ನಿರ್ಣಯ ಮಂಡನೆ ಸಂದರ್ಭದಲ್ಲಿ ವಿವರಿಸಿದರು.


Gadi Kannadiga

Leave a Reply