ಬೆಂಗಳೂರು: ಇಂದಿನ ಸರ್ಕಾರಿ ನೌಕರರಿಗೆ ಸಂಪನ್ಮೂಲದ ಪ್ರಯೋಜನ ಮತ್ತು ಡಿಜಿಟಲ್ ಹಾಗೂ ಕೆಲಸದ ಕೌಶಲ್ಯಗಳನ್ನು ಕಲಿಸುವುದೇ ತರಬೇತಿ ಕಾರ್ಯಾಗಾರ. ಆದ್ದರಿಂದ ತರಬೇತಿ ಕಾರ್ಯಾಗಾರ ಪ್ರತಿಯೊಬ್ಬ ಸರ್ಕಾರಿ ನೌಕರರಿಗೆ ಮುಖ್ಯವಾಗಿದೆ ಎಂದು ಮುಖ್ಯ ಅತಿಥಿ ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್. ಹೆಚ್.ಎಲ್. ಹೇಳಿದರು.
ನಗರದ ಬಾಗಲಗುಂಟೆಯ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ, ಬೆಂಗಳೂರು ವತಿಯಿಂದ ಕಾರ್ಮಿಕ ಇಲಾಖೆ ಬೆಂಗಳೂರು ಡಿಎಲ್ಸಿ-೨ರ ಅಧಿಕಾರಿಗಳು ಮತ್ತು ಕಾರ್ಮಿಕ ನಿರೀಕ್ಷಕರುಗಳಿಗೆ ಆಯೋಜಿಸಿದ್ದ ಎರಡು ದಿನಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ರಿಜಿಸ್ಟ್ರಾರ್ ಜಾನ್ಸನ್. ಕೆ.ಜಿ. ಅವರು ಮಾತನಾಡಿ ಈಗಾಗಲೇ ಕಾರ್ಮಿಕ ಇಲಾಖೆಯ ಬೆಂಗಳೂರು ಡಿಎಲ್ಸಿ-೧ ಮತ್ತು ಬೆಳಗಾವಿ ಡಿಎಲ್ಸಿ ವಿಭಾಗದ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರುಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ಹಾಸನ ಮತ್ತು ಕಲಬುರಗಿ ಡಿಎಲ್ಸಿ ವಿಭಾಗದ ಅಧಿಕಾರಿಗಳು, ಕಾರ್ಮಿಕ ನಿರೀಕ್ಷಕರುಗಳಿಗೆ ಶೀಘ್ರದಲ್ಲಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಕಾರ್ಮಿಕ ಆಯುಕ್ತ ಎ.ಎಚ್. ಉಮೇಶ್, ಅವರು ಮಾತನಾಡಿ ತರಬೇತಿ ಕಾರ್ಯಾಗಾರದಲ್ಲಿ ಎಲ್ಲ ಸಿಬ್ಬಂದಿಗಳು ಸಕ್ರೀಯವಾಗಿ ಭಾಗವಹಿಸಿ ಅದರ ಸಂಪೂರ್ಣ ಲಾಭ ಪಡೆಯಬೇಕು ಮತ್ತು ಲೇಬರ್ ಕೋಡ್ಗಳ ಮಾಹಿತಿ, ಆರ್ಟಿಐ, ನ್ಯಾಯಾಲಯದ ಪ್ರಕರಣಗಳು, ಸರ್ಕಾರಿ ಕಛೇರಿ ವಿಧಿವಿಧಾನಗಳ ಜ್ಞಾನವನ್ನು ಪಡೆಯಬೇಕೆಂದು ಹೇಳಿದರು.
ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರಾಮನಗರದ ಡಿಟಿಐ ಪ್ರಾಚಾರ್ಯ ಎಮ್.ಎಸ್. ನಟರಾಜ್, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಿ.ಆರ್. ವೆಂಕಟ ಸುದರ್ಶನ, ನಿವೃತ್ತ ಕಾರ್ಮಿಕ ಅಧಿಕಾರಿ ರಾಜ ಗೋಪಾಲ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಬಿ. ಕೆಂಪೆಗೌಡ ಅವರು ಭಾಗವಹಿಸಿದ್ದರು.
ಪ್ರತಿಯೊಂದು ತರಬೇತಿ ಕಾರ್ಯಾಗಾರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷ ಅವರಿಗೂ ಕೂಡ ಅಭಿನಂದನೆ ಸಲ್ಲಿಸಲಾಯಿತು. ಸಹಾಯಕ ಕಾರ್ಮಿಕ ಆಯುಕ್ತರಾದ ದೇವರಾಜ್, ತಮ್ಮಣ್ಣ, ಸಂತೋಷ ಹಿಪ್ಪರಗಿ, ನಾಝಿಯಾ ಸುಲ್ತಾನ, ಕಾರ್ಮಿಕ ಅಧಿಕಾರಿಗಳಾದ ಶ್ಯಾಮರಾವ್, ಚಂದ್ರಶೇಖರಯ್ಯ, ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಶ್ರೀಕಾಂತ್. ಕೆ.ಎಸ್., ಹಿರಿಯ ಸಹಾಯಕ ಕೆ. ನಾಗೇಂದ್ರಪ್ಪ, ಪುನೀತ್. ಬಿ.ಎಲ್., ಎಸ್. ಸಿದ್ದರಾಜು ಮುಂತಾದವರು ಹಾಜರಿದ್ದರು. ಸಂಸ್ಥೆಯ ಹಿರಿಯ ಸಹಾಯಕ ಎಸ್.ಎಲ್. ಶ್ರೀಧರ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Gadi Kannadiga > State > ಸಂಪನ್ಮೂಲದ ಪ್ರಯೋಜನ, ಡಿಜಿಟಲ್ ಹಾಗೂ ಕೆಲಸದ ಕೌಶಲ್ಯಗಳನ್ನು ಕಲಿಸುವುದೇ ತರಬೇತಿ ಕಾರ್ಯಾಗಾರ: ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್
ಸಂಪನ್ಮೂಲದ ಪ್ರಯೋಜನ, ಡಿಜಿಟಲ್ ಹಾಗೂ ಕೆಲಸದ ಕೌಶಲ್ಯಗಳನ್ನು ಕಲಿಸುವುದೇ ತರಬೇತಿ ಕಾರ್ಯಾಗಾರ: ಉಪ ಕಾರ್ಮಿಕ ಆಯುಕ್ತ ಗುರುಪ್ರಸಾದ್
Suresh29/04/2022
posted on

More important news
ಶೋಭಾ ಶಿವಾಜಿ ಪಾಟೀಲ ನಿಧನ
13/05/2022