ಗಡಿ ಕನ್ನಡಿಗ
ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಖಾನಾಪೂರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಶಿವಾನಂದ ಕುಂದರಗಿ ಪ್ರಧಾನ ಕಾರ್ಯದರ್ಶಿಯಾಗಿ ಸರಕಾರಿ ಮರಾಠಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ಬಸವರಾಜ ಗಡಾದ ಆಯ್ಕೆಯಾಗಿರುತ್ತಾರೆ. ಪಟ್ಟಣದ ಶ್ರೀ ಸಂತ ಜ್ಞಾನೇಶ್ವರ ಮಂದಿರದಲ್ಲಿ ಖಾನಾಪೂರ ತಾಲೂಕು ಹಿರಿಯ ನಾಗರಿಕರ ಮತ್ತು ನಿವೃತ್ತ ನೌಕರರ ಸಭೆಯಲ್ಲಿ ಈ ಆಯ್ಕೆಯನ್ನು ಸಿ. ಎಸ್. ಪವಾರ ಮತ್ತು ವಿ. ಎಂ. ಬನೋಶಿ ಇವರ ಸೂಚನೆಯ ಮೇರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್. ಜಿ. ಸಿದ್ಧಾಳ ಸಂಘದ ಬೈಲಾಗಳ ಪ್ರಕಾರ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಆಯ್ಕೆಯನ್ನು ಘೋಷಿಸಿದರು. ಪ್ರಾರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಮತ್ತು ಶ್ರೀ ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಸವರಾಜ ಯಳ್ಳೂರ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಬಸವರಾಜ ಗಡಾದ, ಅದೃಶ್ಯಪ್ಪ ಬಳಗಪ್ಪನವರ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಜಿಲ್ಲಾಧ್ಯಕ್ಷರಾದ ಎಸ್. ಜಿ. ಸಿದ್ದಾಳ ಇವರನ್ನೂ ಕೂಡ ಖಾನಾಪೂರ ತಾಲೂಕು ಸಮಸ್ತ ಹಿರಿಯರ ನಾಗರಿಕರ ಸಂಘ ಹಾಗೂ ನಿವೃತ್ತ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ಧಾಳರವರು ಸರಕಾರದಿಂದ ಸಿಗುವ ಸೌಲಭ್ಯಗಳು ಕುರಿತು ಮತ್ತು ಬೇಡಿಕೆಗಳ ಕುರಿತು ಮಾಹಿತಿಯನ್ನು ನೀಡಿದರು. ಪಟ್ಟಣ ಪಂಚಾಯತಿ ಸದಸ್ಯೆ ಮೇಘಾ ಕುಂದರಗಿ ಮಾತನಾಡಿ ಹಿರಿಯ ನಾಗರಿಕರ ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತಂದಲ್ಲಿ ಅವುಗಳನ್ನು ಶೀಘ್ರವೇ ಪ್ರಥಮ ಆದ್ಯತೆ ಮೇರೆಗೆ ಪರಿಹರಿಸುವುದಾಗಿ ಭರವಸೆಯನ್ನು ನೀಡಿದರು. ವಿ ಎಂ. ಬನೋಶಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬರುವ ದಿನಗಳಲ್ಲಿ ಹಿರಿಯರ ಆರೋಗ್ಯದ ವಿಷಯಕ್ಕೆ ಹೆಚ್ಚು ಒತ್ತುಕೊಟ್ಟು ಸಾಧ್ಯವಾದಷ್ಟು ಉಚಿತವಾಗಿ ಚಿಕಿತ್ಸೆಯನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವದಾಗಿ ತಿಳಿಸಿದರು. ವೇದಿಕೆಯ ಮೇಲೆ ಹಿರಿಯ ನಿವೃತ್ತ ಶಿಕ್ಷಕರಾದ ಡಿ. ಎಂ. ಭೋಸಲೆ, ನಿವೃತ್ತ ಶಿಕ್ಷಕಿ ಬೋರ್ಜಿಸ್ ಉಪಸ್ಥಿತರಿದ್ದರು.
ಸಿ. ಎಸ್. ಪವಾರ ಕಾರ್ಯಕ್ರಮ ನಿರೂಪಿಸಿದರು. ಉಮಾಕಾಂತ ವಾಘಧರೆ ವಂದಿಸಿದರು. ಸಭೆಯಲ್ಲಿ ತಾಲೂಕಿನ ಹಿರಿಯ ನಾಗರಿಕರು, ವಿವಿಧ ಇಲಾಖೆಗಳ ನಿವೃತ್ತ ನೌಕರರು ಉಪಸ್ಥಿತರಿದ್ದರು.