This is the title of the web page
This is the title of the web page

Please assign a menu to the primary menu location under menu

State

ಶ್ರೀಪಂಚಮುಖಿ ಆಂಜನೇಯ ದೇವಸ್ಥಾನ ರಾಜ್ಯಪಾಲರಿಂದ ಲೋಕಾರ್ಪಣೆ


ಕೊಪ್ಪಳ ಮಾರ್ಚ್:- ಹೊಸ ಸಂವತ್ಸರ, ಹೊಸ ವರ್ಷದ ಮೊದಲ ದಿನವಾದ ಮಾರ್ಚ 22ರ ಯುಗಾದಿಯಂದು ಬಯಲು ಸೀಮೆಯ ನಾಡು ಕುಷ್ಟಗಿ ತಾಲೂಕಿನಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನವನ್ನು ಕರ್ನಾಟಕದ ಘನವೆತ್ತ ರಾಜ್ಯಪಾಲರಾದ ಥಾವರ್ ಚೆಂದ ಗೆಹ್ಲೋಟ್ ಅವರು ಲೋಕಾರ್ಪಣೆ ಮಾಡಿದರು.
ಕುಷ್ಟಗಿ ತಾಲೂಕಿನ ವಜ್ರಬಂಡಿ ರಸ್ತೆಯಲ್ಲಿರುವ ಜುನಾಲಿಖಾಡ ಶಾಖಾಪೂರ ವ ಮದಲಗಟ್ಟಿ ಹತ್ತಿರದ ಶ್ರೀ ಅಮರನಾಥೇಶ್ವರ ಮಹಾದೇವಮಠ ನಾಗಾಸಾಧು ಆಶ್ರಮದಲ್ಲಿ ಬಯಲ ಅಂಗಳದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮಕ್ಕೆ ದೇಶದ ನಾನಾ ಪ್ರಾಂಥಗಳಿಂದ ಆಗಮಿಸಿದ್ದ ಸ್ವಾಮೀಜಿಗಳು ಮತ್ತು ನಾಗಾ ಸಾಧುಗಳು ಸಾಕ್ಷಿಯಾದರು. ಚೈತ್ರದ ಸಂಭ್ರಮದಲ್ಲಿ.. ವನ ಸಿರಿ ಚಿಗುರುವ ಸುಯೋಗದಲ್ಲಿ ರಾಜ್ಯಪಾಲರು ಆಂಜನೇಯ ದೇವಸ್ಥಾನ ಲೋಕಾರ್ಪಣೆ ಮಾಡುತ್ತಿದ್ದಂತೆ ಭಕ್ತಗಣದಿಂದ ಜಯಘೋಷಗಳು ಮೊಳಗಿದವು. ನಂತರ ಈಶ್ವರನಿಗೆ ಅಭಿಷೇಕ ಮಾಡಿ ,ದೇವಸ್ಥಾನದ ಭೂಮಿ ಪೂಜೆ ಹಾಗೂ ಇನ್ನಿತರ ಪೂಜೆಯಲ್ಲಿ ಭಾಗವಹಿಸಿದ,
ಬಳಿಕ ಗೌರವಾನ್ವಿತ ರಾಜ್ಯಪಾಲರು ಮಾತನಾಡಿ, ಹೊಸ ವರುಷವನ್ನು ಜಗತ್ತಿನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಆದರೆ, ಭಾರತಿಯರಿಗೆ ಯುಗಾದಿಯೇ ಹೊಸ ವರ್ಷದ ಹಬ್ಬದ ಸಂಭ್ರಮವಾಗಿದೆ. ಈ ಹಿನ್ನೆಲೆಯಲ್ಲಿ ನಾಡಿನ ಜನೆತೆಗೆ ಯುಗಾದಿಯ ಶುಭಾಶಯಗಳನ್ನು ತಿಳಿಸುವೆ ಎಂದರು.
ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ನಿರ್ಮಾಣದ ಮೂಲಕ ಶ್ರೀ ಅಮರನಾಥೇಶ್ವರ ನಾಗಸಾಧು ಆಶ್ರಮದ ಈ ನೆಲವು ಪುಣ್ಯಭೂಮಿಯಾಗಿ ಮಾರ್ಪಟ್ಟಿದೆ. ಧರ್ಮ, ಸಂಸ್ಕೃತಿ, ಸಮನ್ವಯ ಮತ್ತು ಸಮೃದ್ಧಿ ದೃಷ್ಟಿಯಿಂದ ಪ್ರೇರಣದಾಯಕವಾಗಿ ಈ ದೇವಾಲಯವು ಮುಂದುವರೆಯಲಿದೆ ಎಂದು ಅವರು ತಿಳಿಸಿದರು.
ಅಮರನಾಥೇಶ್ವರ ಮಹಾದೇವಮಠ ನಾಗಾಸಾಧು ಆಶ್ರಮದ ಪೀಠಾಧೀಶರಾದ ಶ್ರೀ ಮಹಂತ ಸಹದೇವಾನಂದ ಗಿರೀ ಜಿ ಅವರು ಬಾಲ್ಯದಲ್ಲಿಯೇ ದಿಕ್ಷೆ ಪಡೆದ ಮಹಾಮಹೀಮರಾಗಿದ್ದಾರೆ. ಪುಣ್ಯಭೂಮಿ ವಾರಣಾಸಿಯಲ್ಲಿ ಜನಿಸಿದ್ದಾರೆ. ಹರಿದ್ವಾರದಲ್ಲಿ ಧಾರ್ಮಿಕ ಜ್ಞಾನವು ಅವರಿಗೆ ಪ್ರಾಪ್ತವಾಗಿದೆ. ಬಾಲ್ಯದಿಂದಲೇ ಸನ್ಯಾಸಿಯಾಗಿ, ತಾರುಣ್ಯದಲ್ಲಿಯೇ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿದ್ದು ವಿಶೇಷತೆಯಾಗಿದೆ ಎಂದರು. ಶ್ರೀ ಅಮರನಾಥೇಶ್ವರ ಮಹಾದೇವಮಠ ನಾಗಾಸಾಧು ಆಶ್ರಮದ ಮೂಲಕ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸುಧಾರಣೆಯ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದಾರೆ. ಮಾನವ ಜೀವನೋದ್ಧಾರ, ಸನಾತನ ಧರ್ಮದ ಸಂದೇಶ, ವಿಶ್ವಶಾಂತಿ ಹಿನ್ನೆಲೆಯಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣ ಕಾರ್ಯ ಬಹಳ ಮಹತ್ವದ್ದಾಗಿದೆ ಎಂದರು.
ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗಿಯಾಗಿದ್ದು ತಮ್ಮ ಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದ ರಾಜ್ಯಪಾಲರು, ತಾವು ಬಾಲ್ಯದಲ್ಲಿ ಹನುಮಾನ ಭಕ್ತರಾಗಿದ್ದು, ಬಹಳಷ್ಟು ವರ್ಷಗಳ ಕಾಲ ಪ್ರತಿದಿನ ಹನುಮಾನ ಚಾಲೀಸಾ ಪಠಣ ಮಾಡಿದ್ದಾಗಿ ಅವರು ಹೇಳಿದರು. ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದ ಹಿನ್ನೆಲೆಯಲ್ಲಿ ಹನುಮಾನ ಮಂದಿರ ನಿರ್ಮಾಣ ಮಾಡಿರುವುದು ಖುಷಿಯ ವಿಷಯವಾಗಿದ್ದು, ಈ ಮಂದಿರದಲ್ಲಿ ದೇವರ ದರ್ಶನ ಪಡೆದಿರುವುದು ಸಾಮಾಜಿಕ ಸೇವಾ ಕಾರ್ಯಕ್ಕೆ ಮತ್ತು ಸನ್ಮಾರ್ಗದಲ್ಲಿ ನಡೆಯಲು ಮತ್ತಷ್ಟು ಸ್ಫೂರ್ತಿ ನೀಡಿದಂತಾಗಿದೆ ಎಂದು ಅವರು ತಿಳಿಸಿದರು.
ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರು ದೇಶದಲ್ಲಿ ಪ್ರಮುಖವಾಗಿ ಮಂದಿರಗಳ ನೀರ್ಣೋದ್ಧಾರ ಅಭಿಯಾನ ಆರಂಭಿಸಿದ್ದಾರೆ. ವಾರಣಾಶಿ, ಕೇದಾರಾನಾಥ, ಉಜೈನಿ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಈ ಕಾರ್ಯ ನಡೆಸಿ ಧರ್ಮ ಮತ್ತು ಆಧ್ಯಾತ್ಮದ ಸಂದೇಶ ಪ್ರಸಾರ ಮಾಡುತ್ತಿದ್ದಾರೆ ಎಂದರು.
ಜನರಲ್ಲಿ ನೈತಿಕ ವಿಚಾರಗಳು ಹೆಚ್ಚಬೇಕಿದೆ. ದಯಾಳು, ಸಾಮಾಜಿಕ, ಆಧ್ಯಾತ್ಮಿಕ ಮನೋಭಾವನೆ ಹೊಂದಬೇಕಿದೆ. ಭಾರತವು ಮಹಾನ್ ಪರಂಪರಾ ದೇಶವಾಗಿದೆ. ಭಾರತೀಯ ಸಂಸ್ಕೃತಿ ಆದಿ ಮತ್ತು ಅನಂತವಾಗಿದೆ. ಋಷಿ ಮುನಿಗಳು, ಸಾಧು-ಸಂತ ಶರಣರು ಜನಿಸಿ ಬಾಳಿ ಬೆಳಗಿದ ನಾಡು ನಮ್ಮದಾಗಿದೆ. ಇಡೀ ಜಗತ್ತಿನಲ್ಲಿಯೇ ವಿವಿಧೆತೆಯಲ್ಲಿ ಏಕತೆ ಇರುವುದು ನಮ್ಮ ಭಾರತ ಸಂಸ್ಕೃತಿಯ ವಿಶೇಷತೆಯಾಗಿದೆ. ಸರ್ವರೂ ಒಂದು, ಎಲ್ಲ ಜೀವಿಗಳು ಒಂದು ಎನ್ನುವ ತತ್ತ್ವದ ‘ವಸುಧೈವ ಕುಟುಂಬಕಂ ಭಾವನೆಗೆ ಪ್ರೇರಣೆಯಾಗಿದೆ. ಅನೇಕ ಋಷಿಮುನಿಗಳು, ಸಾಧು ಸಂತರು ಹೇಳಿದ ಅನೇಕ ವಿಚಾರಗಳ ಅಂತಿಮ ಉದ್ದೇಶವು ವಿಶ್ವಶಾಂತಿ, ವಿಶ್ವ ಕಲ್ಯಾಣ, ಸಾಮಾಜಿಕ ಸಂರಕ್ಷತೆ, ಸಮತೆಯನ್ನು ಸಾಧಿಸುವುದಾಗಿದೆ ಎಂಬುದನ್ನು ಜನರು ಅರಿತು ಎಲ್ಲರೂ ಒಗ್ಗೂಡಿ ಬಾಳಬೇಕಿದೆ ಎಂದು ಅವರು ಹೇಳಿದರು.
ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ನಮ್ಮ ದೇಶದ ಭವ್ಯ ಪರಂಪರೆಯನ್ನು ಮೆಲುಕು ಹಾಕುವ ಕಾರ್ಯಕ್ರಮ ಇದಾಗಿದೆ ಎಂದು ಶ್ರೀ ಅಮರನಾಥೇಶ್ವರ ಮಹಾದೇವಮಠ ನಾಗಾಸಾಧು ಆಶ್ರಮದ ಕಾರ್ಯಕ್ರಮವನ್ನು ಬಣ್ಣಿಸಿದರು. ಶ್ರೀ ಮಹಂತ ಸಹದೇವಾನಂದ ಗಿರೀ ಜಿ ಅವರ ತಫಸ್ಸಿನ ಫಲವು ಸ್ಮರಣೀಯವಾಗಿದೆ ಎಂದರು.
ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಮಾತನಾಡಿ, ವಾಯುಪುತ್ರ ಹನುಮಂತನು ಜನಿಸಿದ್ದು ನಮ್ಮ ನಾಡು ಕಿಷ್ಕಿಂದೆಯಲ್ಲಿ. ಇಂತಹ ಐತಿಹ್ಯದ ನಮ್ಮದೇ ನಾಡಿನಲ್ಲಿ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚೆಂದ ಗೆಹ್ಲೋಟ್ ಅವರಿಂದ ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆ ಆಗಿರುವುದು ಐತಿಹಾಸಿಕ ಸಂಗತಿಯಾಗಿದೆ ಎಂದು ತಿಳಿಸಿದರು. ಮುಖಂಡರಾದ ದೊಡ್ಡನಗೌಡ ಪಾಟೀಲ ಅವರು ಮಾತನಾಡಿ, ಮಹತ್ವದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ನಾಡಿನ ರಾಜ್ಯಪಾಲರು ಆಗಮಿಸಿ, ನಮ್ಮೊಂದಿಗೆ ಭಾಗಿಯಾಗಿದ್ದು ನಮ್ಮ ಭಾಗ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಉತ್ತರಖಾಂಡದ ಖುಷಿಕೇಶದ ಅನಂತ ವಿಭೂಷಿತ ಮಹಾಮಂಡಲೇಶ್ವರ ಸ್ವಾಮಿ ದೇವಾನಂದ ಗಿರಿ ಮಹಾರಾಜ, ಕಾಶಿ ವಾರಣಾಸಿಯ ಅಷ್ಟಕುಶಾಲ ಮಹಾಂತ ರಾಹುಲ್ ಗಿರಿ ಮಹರಾಜ, ಬೃಂದಾವನದ ಸಾದ್ವಿ ಮಹಾಂತ ಲಕ್ಷ್ಮಿ ಪುರಿ ಮಾತಾಜಿ, ರಾಜಸ್ಥಾನದ ಮಹಾಂತ ಓಂಯತೀಜೀ ಮಹಾರಾಜ.ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ,ಕುಷ್ಟಗಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕರು ಹಾಗೂ ಬಿಜೆಪಿ ಜಿಲ್ಲಾ ಅದ್ಯಕ್ಷರಾದ ದೊಡ್ಡನಗೌಡ ಎಚ್ ಪಾಟೀಲ್,ಕುಷ್ಟಗಿ ಪುರಸಭೆ ಅಧ್ಯಕ್ಷರಾದ ಜಿ.ಕೆ ಹಿರೇಮಠ ,ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಶಾಸಕರಾದ ದೊಡ್ಡನಗೌಡ ಎಲ್ ಪಾಟೀಲ್, ಹಾಗೂ ಸುಪುತ್ರರಾದ ರಾಜುಗೌಡ ಪಾಟೀಲ್ ಸೇರಿದಂತೆ,ಕೊಪ್ಪಳ ಜಿಲ್ಲಾಡಳಿತ ಹಾಗೂ ಕುಷ್ಟಗಿ ತಾಲೂಕಾಡಳಿತದ ಅಧಿಕಾರಿಗಳು, ಭಕ್ತ ವೃಂದದವರು ಉಪಸ್ಥಿತರಿದ್ದರು.ದೊಡ್ಡನಗೌಡ ಎಲ್ ಪಾಟೀಲ್ ಶಾಸಕರು ಹುನಗುಂದ ಅವರು ಸ್ವಾಗತಿಸಿದರು. ಗಜೇಂದ್ರಗಡದ ಅಶೋಕ ಕುಮಾರ ಭಾಗಮಾರ ಗೌರವಾನ್ವಿತ ರಾಜ್ಯಪಾಲರ ಪರಿಚಯ ಮಾಡಿಕೊಟ್ಟರು.

ಆರ್ ಶರಣಪ್ಪ ಗುಮಗೇರಾ.

ಕೊಪ್ಪಳ


Leave a Reply