ಬೆಳಗಾವಿ,ಏ.೨೧: “ರಾಜ್ಯದ ೬ ಕೋಟಿಗೂ ಅಧಿಕ ಜನಸಂಖ್ಯೆಯ ಸೇವೆ ಮಾಡುವುದಕ್ಕಾಗಿ ೬ ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ಅಗತ್ಯವಿದೆ. ಆದರೆ ಸದ್ಯಕ್ಕೆ ಇರುವ ೫ ಲಕ್ಷ ಸರ್ಕಾರಿ ನೌಕರರು ಶ್ರದ್ಧೆ, ಬದ್ಧತೆಯಿಂದ ಜನ ಸೇವೆ ಮಾಡುತ್ತಿದ್ದು, ಉಳಿದಂತೆ ಖಾಲಿ ೧ ಲಕ್ಷಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಗಮನವನ್ನು ಸೆಳೆಯಲಾಗುವುದು” ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಸಂಯಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ (ಏ.೨೧) ಹಮ್ಮಿಕೊಳ್ಳಲಾಗಿದ್ದ ಪ್ರಥಮ ವರ್ಷದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಪ್ರತಿಯೊಂದು ಯೋಜನೆಯನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಹಿರಿದಾಗಿದೆ. ಹೀಗಾಗಿ ಜವಾಬ್ದಾರಿಯುತ ಕಾರ್ಯವನ್ನು ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, “ಸರ್ಕಾರಿ ಕೆಲಸ ಸಮಾಜಮುಖಿ ಕೆಲಸವಾಗಿದೆ. ಸಮಾಜಮುಖಿ ಕೆಲಸ ಎಂದರೆ ದೇವರ ಕೆಲಸವಾಗಿದೆ. ಹೀಗಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳಬೇಕು” ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್.ಹೆಚ್.ವ್ಹಿ ಮಾತನಾಡಿ, ಬಾಕಿ ಉಳಿದಿರುವ ಸರ್ಕಾರಿ ನೌಕರರ ಮೆಡಿಕಲ್ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಸರ್ಕಾರಿ ನೌಕರರಿಗೆ ಭಾರತದಲ್ಲಿ ವಿಶೇಷವಾದ ಗೌರವ ಇದೆ. ಹೀಗಾಗಿ ಇಲಾಖೆಯ ಜವಾಬ್ದಾರಿಯುತ ಅಧಿಕಾರಿ ಹಾಗೂ ಸಿಬ್ಬಂದಿಗಳಾಗಿ ಉತ್ಕೃಷ್ಠ ಕಾರ್ಯ ಕೈಗೊಳ್ಳುವ ಮೂಲಕ ಆ ಗೌರವನ್ನು ಪೋಷಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು, “ಸರ್ಕಾರಿ ಕೆಲಸ ದೊರಕುವುದು ತಂದೆ ತಾಯಿಯ ಪುಣ್ಯದ ಫಲ. ತಮಗೆ ದೊರೆತಿರುವ ಜವಾಬ್ದಾರಿಯುತ ಸರ್ಕಾರಿ ಕಾರ್ಯವನ್ನು ಜನಸೇವೆಗಾಗಿ ನಿಷ್ಠೆಯಿಂದ ನಿರ್ವಹಿಸಬೇಕು” ಎಂದು ಹೇಳಿದರು. ಅಧಿಕಾರಿಗಳು ಜನರೊಂದಿಗೆ ಸ್ನೇಹಮಯದಿಂದ ವರ್ತಿಸಿ ಸರ್ಕಾರಿ ಸೌಲತ್ತುಗಳನ್ನು ಒದಗಿಸಬೇಕಿದೆ. ಇದೇ ರೀತಿ ಶಾಸಕರು, ಸಚಿವರು ಕೂಡ ಅಧಿಕಾರಿಗಳ ಜತೆ ಪ್ರೀತಿ, ನಂಬಿಕೆ, ಸೌಹಾರ್ದತೆಯಿಂದ ವರ್ತಿಸುವ ಮೂಲಕ ಜನರ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉತ್ಕೃಷ್ಠ ಸೇವೆ ಸಲ್ಲಿಸಿದ ಜಿಲ್ಲೆಯ ವಿವಿಧ ಇಲಾಖೆಗಳ ೧೦ ಅಧಿಕಾರಿಗಳನ್ನು ಗುರುತಿಸಿ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ:
ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಸಯೀದಾ ಆಫ್ರಿನ್ಬಾನು ಎಸ್. ಬಳ್ಳಾರಿ, ಜಿಲ್ಲಾ ಪಂಚಾಯಿತಿ (ಅಭಿವೃದ್ಧಿ) ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದಾಮು ಭೀಮು ಚವ್ಹಾನ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ, ಹುಕ್ಕೇರಿ ತಹಶೀಲ್ದಾರ ದೊಡ್ಡಪ್ಪ ಹೂಗಾರ, ಬಿಮ್ಸ್ ಬೋಧಕ ರವಿ ಅಜೂರ, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೆದಾರ ಎಂ.ಎ.ನದಾಫ, ಅಥಣಿ ತಾಲೂಕಾ ಪಂಚಾಯಿತಿ ಅಧೀಕ್ಷಕ ಉದಯಗೌಡ ಪಾಟೀಲ, ಜಿಲ್ಲಾಧಿಕಾರಿ ಕಾರ್ಯಾಲಯದ ಶಿರಸ್ತೆದಾರ ಶಿವಾನಂದ ಖಾಡೆ, ಮಕ್ಕಳಗೇರಿ ಪಿಡಿಓ ನಾಗಪ್ಪ ಆಸೀಲಕರ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ರವಿ ಕರಿಲಿಂಗಣ್ಣವರ, ನೌಕರರ ಸಂಘದ ಜಿಲ್ಲೆ ಹಾಗೂ ತಾಲೂಕು ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಎಲ್.ಜಿ ಮೇತ್ರಿ ಪ್ರಾರ್ಥಿಸಿದರು, ರೇಖಾ ಅಂಗಡಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಅಂಜನಾ ಮುರಗೋಡ ಹಾಗೂ ಚಂದ್ರಶೇಖರ ಕೋಲಕಾರ ನಿರೂಪಿಸಿದರು, ಅದೃಶ್ಯ ಹೈಬತ್ತಿ ವಂದಿಸಿದರು.
Gadi Kannadiga > Local News > ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಖಾಲಿ ಹುದ್ದೆಗಳ ಭರ್ತಿಗೆ ಪ್ರಯತ್ನ: ಪರಿಷತ್ ಸದಸ್ಯ ಹಣಮಂತ ನಿರಾಣಿ
ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಖಾಲಿ ಹುದ್ದೆಗಳ ಭರ್ತಿಗೆ ಪ್ರಯತ್ನ: ಪರಿಷತ್ ಸದಸ್ಯ ಹಣಮಂತ ನಿರಾಣಿ
Suresh21/04/2022
posted on
