ಬೆಳಗಾವಿ: ರಾಜ್ಯದ ಮೊದಲ ಕೋಕಾ ಪ್ರಕರಣದ ತೀರ್ಪು ಪ್ರಕಟಗೊಂಡಿದ್ದು, ಉದ್ಯಮಿ, ಬಿಜೆಪಿ ನಾಯಕ ಆರ್.ಎನ್. ನಾಯಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 9 ಆರೋಪಿಗಳು ದೋಷಿಗಳು ಎಂದು ಬೆಳಗಾವಿಯ ಕೋಕಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಬೆಳಗಾವಿ ಕೋಕಾ ವಿಶೇಷ ಕೋರ್ಟ್ ನ್ಯಾ.ಸಿ.ಎಂ.ಜೋಷಿ ತೀರ್ಪು ಪ್ರಕಟಿಸಿದ್ದು, ಬನ್ನಂಜೆ ರಾಜಾ ಸೇರಿದಂತೆ 9 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ಶಿಕ್ಷೆ ಪ್ರಮಾಣ ಏ.13ರಂದು ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿದೆ.
3 ಕೋಟಿ ಹಫ್ತಾ ನೀಡದ ಕಾರಣಕ್ಕೆ 2013ರ ಡಿಸೆಂಬರ್ 21ರಂದು ಸುಪಾರಿ ನೀಡಿ ಅಂಕೋಲಾ ಉದ್ಯಮಿ, ಬಿಜೆಪಿ ಮುಖಂಡ ಆರ್.ಎನ್. ನಾಯಕ್ ಹತ್ಯೆ ಮಾಡಲಾಗಿತ್ತು. ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 16 ಜನರ ವಿರುದ್ಧ ಕೋಕಾ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ)ಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು