ಬೆಳಗಾವಿ : ಬನದ ಹುಣ್ಣಿಮೆ ಅಂಗವಾಗಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಸೋಮವಾರ ನಡೆಯಬೇಕಿದ್ದ ಜಾತ್ರೆಯನ್ನು ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ.
ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗಲಿದೆ. ಆದರೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.ದೇವಸ್ಥಾನಕ್ಕೆ ಸೀಮಿತವಾಗಿ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳಲಾಗುವುದು ಎಂದು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.ನಿಷೇಧದ ನಡುವೆಯೂ ಗುಡ್ಡದತ್ತ ಹರಿದುಬರುತ್ತಿರುವ ಭಕ್ತಸಮೂಹವನ್ನು ಬ್ಯಾರಿಕೇಡ್ ಅಳವಡಿಸಿ ತಡೆಯಲಾಗುತ್ತಿದೆ.
ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಹಿರೇಕುಂಬಿ, ಚುಳಕಿ, ಮುನವಳ್ಳಿಯ ಶಿಂಧೋಗಿ ಕ್ರಾಸ್, ರಾಮದುರ್ಗ ಮಾರ್ಗದ ಹೂಲಿಕಟ್ಟಿ, ಬೈಲಹೊಂಗಲ ಮಾರ್ಗದ ಕರಿಕಟ್ಟಿ ಹಾಗೂ ಧಾರವಾಡ ಮಾರ್ಗದ ಹಿರೇಉಳ್ಳಿಗೇರಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.