ಗೋಕಾಕ: ೧೯.೫೦ ಕೋಟಿ ರೂಪಾಯಿ ವೆಚ್ಚದಲ್ಲಿ ತಪಸಿ ಗ್ರಾಮದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯನ್ನು ಅತೀ ಶೀಘ್ರವಾಗಿ ಉದ್ಘಾಟನೆ ನೆರವೇರಿಸುವುದಾಗಿ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ತಪಸಿ-ಕೆಮ್ಮನಕೋಲ ಗ್ರಾಮದಲ್ಲಿ ಇತ್ತೀಚೆಗೆ ಕರಣೆ ಮಲಕಾರಿ ಸಿದ್ಧೇಶ್ವರ ಜಾತ್ರೆಯ ನಿಮಿತ್ತವಾಗಿ ಜರುಗಿದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಇದೇ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ವಸತಿ ಶಾಲೆಯನ್ನು ಉದ್ಘಾಟಿಸುವ ಮುನ್ಸೂಚನೆ ನೀಡಿದರು.
ಕಬಡ್ಡಿ ನಮ್ಮ ದೇಶಿಯ ಆಟವಾಗಿದೆ. ಇಂದಿನ ಜಾಗತೀಕ ಸಂದರ್ಭದಲ್ಲಿಯೂ ಮರೆತು ಹೋಗಬಹುದಾಗಿದ್ದ ಈ ಆಟವು ತನ್ನೊಳಗಿನ ಸಾಂಸ್ಕೃತಿಕ ಸಾಮರ್ಥ್ಯದಿಂದಲೇ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಲಾತ್ಮಕ ಪ್ರದರ್ಶನವನ್ನು ನೀಡುತ್ತಾ ಪ್ರಪಂಚದಾದ್ಯಂತ ಗಮನಸೆಳೆಯುತ್ತಿರುವ ನಮ್ಮ ಕಬಡ್ಡಿ ನಮ್ಮ ಹೆಮ್ಮೆಯಾಗಿದೆ ಎಂದು ಹೇಳಿದರು. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಉತ್ತಮ ಸಾಧನೆ ತೋರಬೇಕು. ಶೈಕ್ಷಣಿಕ ಪ್ರಗತಿಯ ಜತೆಗೆ ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು. ಅದರಲ್ಲೂ ನಮ್ಮ ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಅವರು ತಿಳಿಸಿದರು.
ಕುಡಿಯುವ ನೀರಿಗಾಗಿ ಸ್ವಂತ ವೆಚ್ಚ ನೀಡಿದ ಶಾಸಕ- ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಅರಿತ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮದ ರೈತ ನಿಂಗಪ್ಪ ಅರಭಾವಿ ಅವರ ೨ ಗುಂಟೆ ಜಮೀನು ಖರೀದಿಸಿ ಅದರಲ್ಲಿ ತೆರೆದ ಭಾವಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟರು. ಸುಮಾರು ೫ಲಕ್ಷ ರೂಪಾಯಿ ವೆಚ್ಚವನ್ನು ಮಾಡಿ ಕುಡಿಯುವ ನೀರನ್ನು ಅನುಕೂಲ ಮಾಡಿಕೊಟ್ಟಿರುವ ಶಾಸಕರ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಸ್ಥಳೀಯ ಸುರೇಶ ಮಹಾರಾಜರು, ರಾಯಪ್ಪ ತಿರಕನ್ನವರ, ಲಕ್ಷ್ಮಣ ಅರಬನ್ನವರ, ಮುತ್ತೆಪ್ಪ ಮನ್ನಾಪೂರ, ಮಾರುತಿ ಸಾಯನ್ನವರ, ಮಾರುತಿ ಬಣಜಿಗಾರ, ಗುರುನಾಥ ಪೊಲೀಸನವರ, ಗುರುನಾಥ ಕುರೇರ, ಗುರುನಾಥ ದಳವಾಯಿ, ಸಿದ್ದು ಸುಳ್ಳನವರ, ಹಣಮಂತ ಪೂಜೇರಿ, ಶಂಕರ ಭರಮನ್ನವರ, ಸವಿತಾ ಹರಿಜನ, ವಸಂತ ಗಲಗಲಿ, ಬಸವರಾಜ ಭರಮನ್ನವರ, ರೈತ ಮುಖಂಡ ಮಹಾದೇವ ಗೊಡೇರ, ಅಜೀತ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Gadi Kannadiga > Local News > ಗ್ರಾಮಸ್ಥರಿಂದ ಬಾಲಚಂದ್ರ ಜಾರಕಿಹೊಳಿಯವರಿಗೆ ಸನ್ಮಾನ