ಬೆಳಗಾವಿ : ಕನ್ನಡ ಸಾಹಿತ್ಯದ ಹೃದಯ ಭಾಗದಂತಿರುವ ವಚನ ಸಾಹಿತ್ಯದಲ್ಲಿನ ಪ್ರತಿ ವಚನಗಳು ಗೂಢಾರ್ಥ ಹೊಂದಿರುವ ಅವರವರ ಆಚಾರ ವಿಚಾರಗಳಿಗೆ ಸಂಬಂಧಿಸಿದ ಒಂದು ರೀತಿಯ ಪ್ರಮಾಣಗಳಾಗಿವೆ ಎಂದು ಬೆಳಗಾವಿಯ ಲಿಂಗರಾಜ್ ಕಾಲೇಜಿನ ಬಿ. ಬಿ. ಎ. ವಿಭಾಗದ ಕನ್ನಡ ಉಪನ್ಯಾಸಕ ಬಿ. ಬಿ. ಮಠಪತಿ ಹೇಳಿದರು.
ಅವರು ರವಿವಾರ ದಿ 6 ರಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾದ ‘ದಿ. ಎಸ್. ವಿ. ಬಾಗಿ, ದಿ. ನೇಮಿನಾಥ ಇಂಚಲ ಮತ್ತು ದಿ ಬೆಟಗೇರಿ ಕೃಷ್ಣಶರ್ಮ ರವರ ದತ್ತಿ , ಕಾವ್ಯ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಹೇಳಿದರು.
ವಚನ ಸಾಹಿತ್ಯದ ಮೂಲಪುರುಷ ಬಿಬ್ಬಿ ಬಾಚಯ್ಯನವರ ಕುರಿತು ಮಾತನಾಡಿದ ಅವರು ಕನ್ನಡ ಸಾಹಿತ್ಯಕ್ಕೆ ಶತಮಾನಗಳ ಇತಿಹಾಸವಿದೆ. ಆದರೆ ಸಾಹಿತ್ಯ ಶ್ರೀಮಂತವಾದದ್ದು ವಚನ ಸಾಹಿತ್ಯ ಬೆಳೆದಾಗ. ಈ ವಚನ ಸಾಹಿತ್ಯದ ಮೂಲಪುರುಷ ಬಿಬ್ಬಿ ಬಾಚಯ್ಯ 11ನೇ ಶತಮಾನದ ಪೂರ್ವಾರ್ಧದಲ್ಲಿ ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಜನಿಸಿದ್ದರು.ಇವರು ಭಕ್ತಿ,ಪ್ರಸಾದ ಮತ್ತು ಜೀವನಕ್ಕೆ ಸಂಬಂಧಿಸಿದ ಸುಮಾರು 102 ವಚನಗಳನ್ನು ಬರೆದಿದ್ದರು. ಪ್ರತಿವಚನವು ಜೀವನದ ಸಾರವನ್ನು ಎತ್ತಿ ಹೇಳುವಂತಿತ್ತು. ಆಗಿನ ವಚನಗಳು ಅವರವರ ಪ್ರಸ್ತುತ ಆಚಾರ ವಿಚಾರಗಳಿಗೆ ಸಂಬಂಧಿಸಿದವುಗಳಾಗಿದ್ದರೂ ಸಹ ಅವು ಈಗಲೂ ಪ್ರಸ್ತುತವಾಗಿವೆ.ಆ ನಿಟ್ಟಿನಲ್ಲಿ ವಚನ ಸಾಹಿತ್ಯ ಬೆಳೆಯುತ್ತಾ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿತು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಸ.ರಾ ಸುಳಕೂಡೆ ಮಾತನಾಡಿ ದತ್ತಿ ಕಾರ್ಯಕ್ರಮಗಳು ಕನ್ನಡ ಶ್ರೀಮಂತ ಗೊಳಿಸಿದ ಹಿಂದಿನ ಕನ್ನಡದ ಮೇರು ಜೀವಗಳನ್ನು ಅವರ ಸಾಧನೆಗಳನ್ನು ನೆನಪಿಸುವ ವಿಶೇಷ ಕಾರ್ಯಕ್ರಮಗಳಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ ದತ್ತಿ ಕಾರ್ಯಕ್ರಮಗಳು ಇತಿಹಾಸ ಸೃಷ್ಟಿಸಿದ ಮತ್ತು ಸಾಹಿತ್ಯವನ್ನು ವಿವಿಧ ಪ್ರಾಕಾರಗಳಲ್ಲಿ ಬೆಳೆಸಿದ ಮೇರು ವ್ಯಕ್ತಿತ್ವಗಳನ್ನು ನೆನೆಸುವ ಕಾರ್ಯಕ್ರಮಗಳಾಗಿದ್ದು . ಈಗಿನ ಪೀಳಿಗೆಗೆ ದಾರಿದೀಪ ಆಗಿವೆ ಎಂದರು. ಕಾರ್ಯಕ್ರಮದಲ್ಲಿ ಗೋಕಾಕ ತಾಲೂಕಿನ ಕಸಾಪ ಅಧ್ಯಕ್ಷೆ ಭಾರತಿ ಮದಬಾವಿ ಆನಂದ ಕಂದ ಬೆಟಿಗೇರಿ ಕೃಷ್ಣಶರ್ಮರ ಜೀವನ ಚರಿತ್ರೆ ಮತ್ತು ಅವರು ಗ್ರಾಮೀಣ ಭಾಷೆಯಲ್ಲಿ ಯಾವ ರೀತಿ ಸಾಹಿತ್ಯವನ್ನು ಎಲ್ಲರೂ ಆಸ್ವಾದಿಸುವಂತೆ ಮಾಡಿದರು ಎಂದು ಅವರ ನಲ್ವಾಡಗಳೆಂಬ ಪದಗಳನ್ನು ಹಾಡಿ ವಿವರಿಸಿದರು. ಇದೇ ಸಂದರ್ಭದಲ್ಲಿ ಬೆಳಗಾವಿಯ ಅನಾಥಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಭಾವಗೀತೆ ಸ್ಪರ್ಧೆಯ ಸ್ಪರ್ಧಾ ವಿಜೇತರಿಗೆ ದಾನಿಗಳಾದ ಶೈಲಜಾ ಬಿಂಗೆ ರವರಿಂದ ಬಹುಮಾನ ನೀಡಿ ಗೌರವಿಸಲಾಯಿತು. ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ವಿಶೇಷ ರೀತಿಯಲ್ಲಿ ಸಹಾಯ ಸಹಕಾರ ನೀಡುತ್ತಿರುವ ಮಲ್ಲಿಕಾರ್ಜುನ ಕನಶೆಟ್ಟಿ,ಮಹಾಂತೇಶ ತಾಂವಶಿ,ಡಾ.ವಿಜಯಲಕ್ಷ್ಮಿ ಪುಟ್ಟಿ ಮತ್ತು ಸಾಧಕಿ ಪ್ರೀತಿ ಸವದಿ ಯವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು ರಾಜೇಶ್ವರಿ ಹಿರೇಮಠ,ಪ್ರತಿಭಾ ಕಳ್ಳಿಮಠ ನಂದಿತಾ ಮಾಸ್ತಿಹೊಳಿಮಠ, ಡಿ.ಎಸ್.ದೊಡ್ಡಬಂಗಿ ಅವರು ಕಾವ್ಯ ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷರಾದ ಸುರೇಶ ಹಂಜಿ, ಡಾ. ಸಂಜಯ ಶಿಂದಿಹಟ್ಟಿ,ಎಸ್ ಬಿ ದಳವಾಯಿ, ರಮೇಶ ಬಾಗೇವಾಡಿ, ಮಲ್ಲಿಕಾರ್ಜುನ ಕೋಳಿ ಸಾಹಿತಿಗಳಾದ ಹೇಮಾ ಸೋನೋಳ್ಳಿ,, ಜಯಶೀಲಾ ಬ್ಯಾಕೋಡ, ಅನ್ನಪೂರ್ಣ ಕನೋಜ, ಗೌರಾದೇವಿ ತಾಳಿಕೋಟಿಮಠ, ಇಂದಿರಾ ಮೂಟೆಬೆನ್ನೂರು ಸೇರಿದಂತೆ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿ ಅತಿಥಿಗಳನ್ನುಪರಿಚಯಿಸಿದರು. ಕಾರ್ಯದರ್ಶಿಗಳಾದ ಎಂ. ವೈ. ಮೆಣಸಿನಕಾಯಿ ನಿರೂಪಿಸಿದರು. ಶಿವಾನಂದ ತಲ್ಲೂರ ವಂದಿಸಿದರು.