ಹುಬ್ಬಳ್ಳಿ: ಥರ್ಮಲ್ ಪವರ್ ಪ್ಲಾಂಟ್ ನಲ್ಲಿ 21.55 ಮಿಲಿಯನ್ ಟನ್ ಸರಾಸರಿ ನಮ್ಮಲ್ಲಿ ಸ್ಟಾಕ್ ಇದೆ. ಕೋಲ್ ಕಂಪನಿಗಳಲ್ಲಿ 72.5 ಮಿಲಿಯನ್ ಸ್ಟಾಕ್ ಇದೆ. ಅತಿ ಹೆಚ್ಚು ವಿದ್ಯುತ್ ಬೇಡಿಕೆ ಈ ತಿಂಗಳಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ಆರ್ಥಿಕತೆ ಉತ್ತಮವಾಗಿದ್ದು ಸಹ ಇದಕ್ಕೊಂದು ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ರಾಷ್ಟ್ರದಲ್ಲಿ ಕಲ್ಲಿದ್ದಲು ಅಭಾವ ವಿಚಾರವಾಗಿ ನಗರದಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಈ ಬಾರಿ ಭಯಂಕರ ಬಿಸಿಲು ಬಂದಿದ್ದು ಇದಕ್ಕೊಂದು ಕಾರಣ. ದೇಶದ ಹಲವೆಡೆಗಳಲ್ಲಿ ಎಲ್ಲ ಭಾಗದಲ್ಲಿ ಸ್ಟಾಕ್ ಇದೆ. ಆದರೆ ಇನ್ನೇನು 10 ದಿನಕ್ಕೆ ಕತ್ತಲೆ ಅವರಿಸುತ್ತೆ ಅನ್ನೋದನ್ನ ಕೆಲವರು ಬಿಂಬಿಸುತ್ತಿದ್ದಾರೆ, ಅದು ಸರಿಯಲ್ಲ. ನಾವು ಪ್ರತಿ ದಿನ 1.7 ಮಿಲಿಯನ್ ಟನ್ ಸಪ್ಲೈ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾಗಿ ಬಂದಿದ್ದರಿಂದ ಸಾಗಣೆ ಮಾಡಲು ರೈಲ್ವೆ ಇಲಾಖೆ ಹಲವು ಕ್ರಮ ಕೈಗೊಂಡಿದೆ ಎಂದರು.
ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಎನ್ನುವುದನ್ನು ಸ್ಪಷ್ಟ ಪಡಿಸುತ್ತೇನೆ. ನಿತ್ಯವೂ ಸಹ ನಾವು ಸಪ್ಲೈ ಮಾಡುತ್ತಿದ್ದೇವೆ. ಎಷ್ಟು ಖಾಲಿಯಾಗುತ್ತದೆಯೋ ಅಷ್ಟು ನಾವು ತುಂಬುತ್ತಿದ್ದೇವೆ. ಈಗಾಗಲೇ ಬೇಕಾದಷ್ಟು ಸ್ಟಾಕ್ ಇದೆ ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಿಎಸ್ಐ ನೇಮಕಾತಿ ರದ್ದು ಹಿನ್ನೆಲೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಆ ಬಗ್ಗೆ ಸಾರಾಸಾರವಾಗಿ ನಿರ್ಧಾರ ಕೈಗೊಂಡಿದೆ. ಟೆಕ್ನಾಲಜಿ ಬಳಸಿ ಕೆಲವೊಂದು ಅಪರಾಧ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ.ಈಗಾಗಲೇ ಪ್ರಮುಖ ಆರೋಪಿಗಳನ್ನ ಬಂಧಿಸಿದ್ದಾರೆ. ಮುಂದೆಯೂ ಈ ರೀತಿ ಆಗದಂತೆ ಸಿಎಂ ಗಮನ ಹರಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಕೆಲವೊಮ್ಮೆ ಈ ರೀತಿಯ ಸಂಗತಿಗಳು ಅನಿವಾರ್ಯವಾಗಿ ಆಗುತ್ತವೆ. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.