ಸವದತ್ತಿ: ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ಪತ್ನಿಯೊಬ್ಬಳು ಉಪ್ಪಿಟ್ಟಿನಲ್ಲಿ ವಿಷ ಹಾಕಿ ಗಂಡನನ್ನು ಕೊಲ್ಲಲು ಯತ್ನಿಸಿರುವ ಘಟನೆ ಆಗಸ್ಟ್ 11ರಂದು ಬೆಳಿಗ್ಗೆ ಸವದತ್ತಿ ತಾಲೂಕಿನ ಗೋರಾಬಾಳ ಗ್ರಾಮದಲ್ಲಿ ನಡೆದಿದೆ.
ವಿಷಪೂರಿತ ಉಪ್ಪಿಟ್ಟು ತಿಂದ ಸವದತ್ತಿ ತಾಲೂಕಿನ ಗೋರಾಬಾಳ ಗ್ರಾಮದ ನಿಂಗಪ್ಪ ಪಕ್ಕೀರಪ್ಪ ಹಮನಿ (35) ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪತ್ನಿ ಸಾಂವಕ್ಕ (32) ಹಾಗೂ ಇವರ ಸಹೋದರ ಪಕ್ಕೀರಪ್ಪ ಲಕ್ಷ್ಮಣ ಶಿಂಧೋಗಿ (30) ಆರೋಪಿಗಳು.
ಆಗಸ್ಟ್ 11ರಂದು ಬೆಳಿಗ್ಗೆ ಸಾಂವಕ್ಕ ಅವರು ಸಹೋದರ ಪಕ್ಕೀರಪ್ಪಾ ಅವರ ಪ್ರಚೋದನೆಯಿಂದ ಪತಿ ನಿಂಗಪ್ಪನನ್ನು ಸಾಯಿಸಿದರೆ ಆತನ ಪಾಲಿನ ಜಮೀನು ತನ್ನ ಹೆಸರಿಗೆ ಆಗುತ್ತದೆಂಬ ಉದ್ದೇಶದಿಂದ ಬೆಳೆಗೆ ಸಿಂಪಡಿಸುವ ಕೀಟನಾಶಕದ ವಿಷಕಾರಿ ಪದಾರ್ಥವನ್ನು ಉಪಹಾರಕ್ಕಾಗಿ ಮಾಡಿದ ಉಪ್ಪಿಟ್ಟಿನಲ್ಲಿ ಬೆರೆಸಿ ಪತಿಗೆ ನೀಡಲಾಗಿ, ಅದನ್ನು ತಿಂದ ಕೆಲ ಗಂಟೆಗಳಲ್ಲಿ ನಿಂಗಪ್ಪ ತೀವ್ರ ನೋವಿನಿಂದ ಬಳಲಿದರು. ಕುಟುಂಬದವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ, ವೈದ್ಯರ ಸಲಹೆ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಿದರು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದೇ ವಿಷಪೂರಿತ ಉಪ್ಪಿಟ್ಟು ತಿಂದ ನಾಯಿ, ಬೆಕ್ಕು ಸತ್ತು ಹೋಗಿವೆ.ಪ್ರಕರಣದಲ್ಲಿ ಪತ್ನಿ ಸಾಂವಕ್ಕ ಹಾಗೂ ಆಕೆಯ ಸಹೋದರ ಪಕ್ಕೀರಪ್ಪ ಲಕ್ಷ್ಮಣ ಶಿಂದೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.