ಗಡಿ ಕನ್ನಡಿಗ

ಖಾನಾಪುರ: ಕಾಮಗಾರಿ ಮಾಡಿ ಪೂರ್ಣಗೊಳಿಸಲಾಗಿದೆಯೆಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಸರ್ಕಾರದ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿರುವ ಖಾನಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ,ಎಂಜಿನಿಯರ್ ಹಾಗೂ ಗುತ್ತಿಗೆದಾರನ ಮೇಲೆ ವಕೀಲ ದೀಪಕ ಅಂಬಲಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದಾರೆ.
ಈ ಕುರಿತು ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಅವರು ಖಾನಾಪುರ ತಾಲೂಕಿನ ಕರಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಂಬಳದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಕಂಪೌಂಡ ವಾಲ್,ಸ್ಲೈಡಿಂಗ ಡೋರ್,ನೀರಿನ ಟ್ಯಾಂಕ್,ಗೋಡೆಗೆ ಟೈಲ್ಸ್, ಬಣ್ಣ ಸೇರಿದಂತೆ ವಿವಿಧ ಕಾಮಗಾರಿಗೆ ಸರಕಾರದಿಂದ 2025ರಲ್ಲಿ ಎರಡು ಲಕ್ಷ ತೊಂಬತ್ತೈದು ಸಾವಿರದ ಮುನ್ನೂರ ಎಂಬತ್ತೈದು ರೂಪಾಯಿ ಬಿಡುಗಡೆ ಮಾಡಲಾಗಿತ್ತು.
ಆದರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾನು ಖುದ್ದಾಗಿ ಬೇಟಿ ನೀಡಿ ಪರಿಶೀಲನೆ ಮಾಡಿದಾಗ ಅಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆದಿಲ್ಲ ಹಾಗೂ ಕಟ್ಟಡ ನೆಲಸಮಗೊಳಿಸುವಂತೆ ಈಗಾಗಲೇ ಆರೋಗ್ಯ ಇಲಾಖೆಯಿಂದ ಆದೇಶವಿದ್ದರೂ ಇಓ ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಈ ಕಾಮಗಾರಿ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿದ್ದ ಅಪರಾಧ ಮತ್ತು ಅದನ್ನ ಪರಿಶೀಲಿಸಬೇಕಾದ ಎಂಜಿನಿಯರ್ ಕೂಡ ಕಾಮಗಾರಿ ನಡೆದಿದೆ ಎಂದು ದೃಡೀಕರಿಸಿದ್ದು ಅದರಲ್ಲಿ ಪಾಲುದಾರರಾಗಿದ್ದಾರೆ.
ಅಲ್ಲದೇ ಇಓ ಮತ್ತು ತಾಪಂ ಎಂಜಿನಿಯರ್ ಹಾಗೂ ಗುತ್ತಿಗೆದಾರ ಸೇರಿ ನಕಲಿ ಬಿಲ್ ಸೃಷ್ಟಿಸಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಸರಕಾರಕ್ಕೆ ಸಲ್ಲಿಸಿ ದುಡ್ಡು ತೆಗೆದಿದ್ದು ಇದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಗುತ್ತಿಗೆದಾರನ ಪರವಾನಗಿ ವಶಪಡಿಸಿಕೊಂಡು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತಿದ್ದೇವೆ ಎಂದರು.


