World

ಜೀವನದಲ್ಲಿ ಆಆರೋಗ್ಯ ಶಿಕ್ಷಣ ಮುಖ್ಯ: ಡಾ. ವನಿತಾ ಮೆಟಗುಡ

WhatsApp Group Join Now
Telegram Group Join Now

ಬೆಳಗಾವಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಿ. ಶ್ರೀಮತಿ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾಕ್ಟರ್ ವನಿತಾ ಬ.ಮೆಟಗುಡ್ ಇವರು ಮಾತನಾಡುತ್ತಾ ಹದಿಹರೆಯದ ಸಮಸ್ಯೆಗಳು ಎಂಬ ವಿಷಯದ ಕುರಿತು, ವೈಜ್ಞಾನಿಕ ವಿಶೇಷ ಉಪನ್ಯಾಸವನ್ನು ನೀಡಿದರು. ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿರುವ ಉದಯ ಪ್ರೌಢಶಾಲೆಯಲ್ಲಿ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹದಿಹರೆಯದಲ್ಲಿ ಬರುವ ದೈಹಿಕ ಬೆಳವಣಿಗೆಯ ಕುರಿತು ಸಮಸ್ಯೆಗಳು ಏನಾದರೂ ತಮಗೆ ಅನಿಸಿದರೆ ತಮ್ಮ ಪಾಲಕರ ಜೊತೆಗೆ ಚರ್ಚಿಸಿ ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಬೇಕೆಂದು ಹೇಳಿದರು. ಆಂತರಿಕ ಸಮಸ್ಯೆಗಳನ್ನು ಹೇಳದೆ ಹೋದರೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವನದಲ್ಲಿ ಏನಾದರೂ ಕಹಿ ಘಟನೆಗಳು ಸಂಭವಿಸಬಹುದು. ಆದ್ದರಿಂದ ತಾವೆಲ್ಲ ಯಾವುದೇ ಮಾನಸಿಕ ಹಿಂಜರಿಕೆಗೆ ಒಳಗಾಗದೆ ಮುಕ್ತ ಮನಸ್ಸಿನಿಂದ ಪರಿಹಾರ ಕಂಡುಕೊಳ್ಳಬೇಕು. ಇದು ನಮ್ಮ ತಾಯಿಯವರು ನಮಗೆ ಹೇಳಿಕೊಟ್ಟ ಜೀವನದ ಅತ್ಯಂತ ಉತ್ತಮವಾದ ಪಾಠವಾಗಿರುತ್ತದೆ. ನಮ್ಮ ತಾಯಿಯವರ ಆಸೆಯಂತೆ ಶಾಲಾ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ನಾವು ಪ್ರತಿ ವರ್ಷ ದತ್ತಿ ನಿಧಿ
ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ ಎಂದು ಹೇಳಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ.ಶ್ರೀ. ಮೆಟಗುಡ್ ಇವರು ತಮ್ಮ ಪ್ರಾಸ್ತಾವಿಕ ನುಡಿಗಳನ್ನು ಹೇಳುತ್ತಾ ದತ್ತಿನಿಧಿ ಕಾರ್ಯಕ್ರಮದ ವಿಶೇಷತೆಯ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಯುವ ಹಾಗೆ ವಿವರಿಸಿದರು. ಇಂದಿನ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯ, ಕನ್ನಡ ಭಾಷೆಯ ಪ್ರಾಮುಖ್ಯತೆಯ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾಕ್ಟರ್ ವಿ.ವಿ ಎಣ್ಣಿ ಖ್ಯಾತ ವೈದ್ಯರು ಬೆಳಗಾವಿ ಇವರು ಮಾತನಾಡುತ್ತಾ, ಜ್ಞಾನಕ್ಕೆ ವಯಸ್ಸಿನ ಮಿತಿ ಇಲ್ಲ ಶಿಕ್ಷಕರಾಗುವುದಕ್ಕಿಂತ ವಿದ್ಯಾರ್ಥಿಯಾಗಿರುವುದೇ ಲೇಸು, ನಾವೆಂದೂ ಗುರುಗಳಾಗಲು ಸಾಧ್ಯವಿಲ್ಲ ಜೀವನದ ಪ್ರತಿಯೊಂದು ಹಂತದಲ್ಲಿ ಇನ್ನೊಬ್ಬರಿಂದ ಕಲಿಯುವ ವಿದ್ಯೆ ಇದ್ದೇ ಇರುತ್ತದೆ. ಇಂದಿನ ಶೈಕ್ಷಣಿಕ ಹಂತದಲ್ಲಿ ವಿಷಯವಾರು ಶಿಕ್ಷಕರುಗಳು ಇರಬೇಕು. ಅಂದಾಗ ಮಾತ್ರ ಪ್ರತಿಯೊಂದು ವಿಷಯದ ಬಗ್ಗೆ ನಾವು ಕೂಲಂಕುಶವಾಗಿ ತಿಳಿದುಕೊಳ್ಳಬಹುದು. ಮಾನವನ ವಿಕಾಸದಲ್ಲಿ ಪ್ರಾಚೀನತೆಗೂ ಹಾಗೂ ಆಧುನಿಕತೆಗೂ ಬಹಳಷ್ಟು ವ್ಯತ್ಯಾಸಗಳಾಗಿವೆ, ಇದರಲ್ಲಿ ಅನೇಕ ಸುಧಾರಣೆಗಳನ್ನು ನಾವು ತಾಂತ್ರಿಕವಾಗಿ ಕಾಣಬಹುದು. ಪರಿಣಾಮವಾಗಿ ನಾವು ಇಂದು ಶೈಕ್ಷಣಿಕವಾಗಿ ಅತ್ಯಂತ ಮುಂದುವರೆದಿದ್ದೇವೆ ಎಂದುಕೊಂಡರೂ ಕೂಡ ಜ್ಞಾನಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎನ್ನುವುದನ್ನು ನಾವು ಸದಾ ಕಾಲ ನೆನಪಿನಲ್ಲಿಡಬೇಕು. ಅಂದಾಗ ಮಾತ್ರ ಆಳವಾದ ವಿಷಯಜ್ಞಾನವನ್ನು ಹೊಂದಲು ಸಾಧ್ಯವಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಸುಮಿತ್ರ ಇಂಗಳಗಿ ಮುಖ್ಯೋಪಾಧ್ಯಾಯರು ಉದಯ ಪ್ರೌಢಶಾಲೆ ಇವರು ಮಾತನಾಡಿ,ನಮ್ಮ ಶಾಲಾ ವಿದ್ಯಾರ್ಥಿನಿಯರಿಗಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾದ ಕಾರ್ಯಕ್ರಮವನ್ನು ಕೊಟ್ಟಿದ್ದಕ್ಕೆ ತಮಗೆಲ್ಲ ಧನ್ಯವಾದಗಳು ಎಂದು ತಮ್ಮ ಸಮರ್ಪಣಾ ಭಾವವನ್ನು ವ್ಯಕ್ತಪಡಿಸಿದರು. ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿಗಳಾದ ಶ್ರೀಎಮ್ ವಾಯ್ ಮೆಣಸಿನಕಾಯಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಭೆಯಲ್ಲಿದ್ದ ಎಲ್ಲ ಅತಿಥಿಗಳನ್ನು ಡಾ.ಹೇಮಾ ಸೋನಳ್ಳಿ ಇವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಡಾ, ಭಾರತಿ ಮಠದ ಮಹಿಳಾ ಸಾಹಿತಿಗಳು ದತ್ತಿ ಪರಿಚಯವನ್ನು ಮಾಡಿಕೊಟ್ಟರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ವೀರಭದ್ರ ಅಂಗಡಿ ಇವರು ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ “ಚಂದ್ರ ಬಿಂದು”ಕವನ ಸಂಕಲನದ ಲೇಖಕರಾದ ಡಾ. ಅಡಿವೆಪ್ಪ ಬ. ಇಟಗಿ ಉಪನ್ಯಾಸಕರು ಖಾನಾಪುರ
ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಸ. ರಾ ಸುಳಕೂಡೆ, ಶ್ರೀಮತಿ ಜ್ಯೋತಿ ಬದಾಮಿ, ಭುವನೇಶ್ವರಿ, ಗೀತಾ ಶೆಟ್ಟರ್, ಮತ್ತು ಮಹಾಂತೇಶ ನಗರವಾಸಿಗಳ ಸಂಘದ ಬಿಎಡ್ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಮತ್ತು ಉದಯ ಪ್ರೌಢಶಾಲೆಯ ವಿದ್ಯಾರ್ಥಿಗಳು, ಎಲ್ಲಾ ಸಿಬ್ಬಂದಿ ವರ್ಗದವರು ಕೂಡ ಭಾಗವಹಿಸಿದ್ದರು.

WhatsApp Group Join Now
Telegram Group Join Now

Related Posts