ಕೊಪ್ಪಳ:- ಕೆ ಎಸ್ ಆಸ್ಪತ್ರೆಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರಂಗೋಲಿ ಸ್ಪರ್ಧೆ ಮತ್ತು ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಶ್ರೀಮತಿ ಹೇಮಲತಾ ನಾಯಕ್ ವಿಧಾನ ಪರಿಷತ್ ಸದಸ್ಯರು ಮಾತನಾಡಿ ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಅರಿವು ಹೊಂದಿರಬೇಕು ಅದನ್ನು ಸಂಘಟನಾತ್ಮಕವಾಗಿ ಎದುರಿಸುವ ಬಗ್ಗೆ ಆಲೋಚನಾ ಶಕ್ತಿ ವೃದ್ಧಿ ಆಗುವಂತೆ ಸ್ವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಪುರುಷ ಸಮಾಜದ ಜೊತೆ ಮಹಿಳೆಯರು ಕೂಡ ಸಮಾನರು ಎಂಬ ಸಮಭಾಮ ಸಮಾಜದಲ್ಲಿ ಬರುವಂತಾಗಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸಾವಿತ್ರಿ ಕಡಿ, ಅಪರ ಜಿಲ್ಲಾಧಿಕಾರಿಗಳು, ಕೊಪ್ಪಳ ಮಾತನಾಡಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು. ಮಹಿಳೆಯರ ಶಿಕ್ಷಣ ಹೆಚ್ಚಾದಂತೆ ಮಹಿಳೆಯರಿಗೆ ಆಗುತ್ತಿರುವ ದೌರ್ಜನ್ಯ ಮತ್ತು ಅಸಮಾನತೆ ಕಡಿಮೆಯಾಗಲು ಸಾಧ್ಯ. ಇದಕ್ಕೆ ಶಿಕ್ಷಣ ಒಂದೇ ಮಾರ್ಗ ಶಿಕ್ಷಣದಿಂದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಎಲ್ಲಾ ಅವಕಾಶಗಳು ಒದಗಿ ಬರುವುದರಿಂದ, ಮಹಿಳೆಯರಿಗೆ ಆತ್ಮವಿಶ್ವಾಸ, ಧೈರ್ಯ ಮತ್ತು ಸ್ವ ಸುಧಾರಣೆ ಸಾಧ್ಯವಾಗುತ್ತದೆ. ಇದರಿಂದ ಸಮಾನವಾದ ಅವಕಾಶಗಳು ಸಿಗುತ್ತವೆ ಎಂದರು.
ಕೆ ಎಸ್ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಎಲುಬು ಕೀಲು ತಜ್ಞರಾದ ಡಾಕ್ಟರ್ ಬಸವರಾಜ್ ಕೆ ಶರಣಪ್ಪ ಮಾತನಾಡಿ, ಮಹಿಳೆ ಸಮಾಜದ ಕಣ್ಣಾಗಿದ್ದು ಸಮಾಜದ ಪ್ರತಿಯೊಂದು ಕೆಲಸಕ್ಕೂ ಪುರುಷರಷ್ಟೇ ಸಮಾನವಾದ ಶ್ರಮವನ್ನ ವಹಿಸಿ ಕುಟುಂಬ ಮತ್ತು ಸಮಾಜವನ್ನು ಅಭಿವೃದ್ಧಿ ಮಾಡುವಲ್ಲಿ ಮಹಿಳೆಯ ಪಾತ್ರ ಪ್ರಮುಖವಾದದ್ದು ಎಂದರು. ವೈದ್ಯರು ಒಬ್ಬ ರೋಗಿಗೆ ಉಸಿರು ಹೋಗದಂತೆ ನೋಡಿಕೊಳ್ಳಬಹುದು ಆದರೆ ಒಬ್ಬರಿಗೆ ಉಸಿರು ನೀಡುವ ಸಾಮರ್ಥ್ಯ ಇರುವುದು ಪ್ರಪಂಚದಲ್ಲಿ ಮಹಿಳೆಯರಿಗೆ ಮಾತ್ರ. ಆದ್ದರಿಂದ ಮಹಿಳೆಯರು ಎಲ್ಲಾ ರೀತಿಯ ಅವಕಾಶವನ್ನು ಪಡೆದುಕೊಳ್ಳಲು ಅರ್ಹತೆ ಇದ್ದು. ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ಕಾರಣ ಮಹಿಳೆಯ ಕಠಿಣ ಪರಿಶ್ರಮ, ಸ್ವ ಸಾಮರ್ಥ್ಯ, ತಾಳ್ಮೆ ಮತ್ತು ತ್ಯಾಗದಂತ ಗುಣಗಳು ಆಕೆಯನ್ನ ಅತ್ಯುನ್ನತ ಸ್ಥಾನಕ್ಕೆ ತರಲು ಕಾರಣವಾಗಿದೆ. ಅಂತ ಮಹಿಳೆಯನ್ನು ನಾವು ಗೌರವದಿಂದ ಕಾಣಬೇಕಾದದ್ದು ಸಮಾಜದ ಆದ್ಯ ಕರ್ತವ್ಯವಾಗಿದೆ.
ಗ್ಲೋಬಲ್ ಮೀಡಿಯಾ ಮಾನಿಟರಿಂಗ್ ಪ್ರಾಜೆಕ್ಟ್ ಸಮೀಕ್ಷೆ ಪ್ರಕಾರ,ಭಾರತದಲ್ಲಿ ಶೇ.6ರಷ್ಟು ಪುರುಷರು ಮಾತ್ರವೇ ಅಡುಗೆ ಬಲ್ಲರು, 94% ಮಹಿಳೆಯರು ಮಾಡುತ್ತಾರೆ. ಶೇ.8ರಷ್ಟು ಪುರುಷರು ಕಸ ಗುಡಿಸಿ, ಮನೆ ಒರೆಸಬಲ್ಲರು.92% ಮಹಿಳೆಯರೇ ಮಾಡುತ್ತಾರೆ. ಶೇ.3ರಷ್ಟು ಗಂಡಸರು ಮಾತ್ರವೇ ಬಟ್ಟೆಗಳನ್ನು ಒಗೆಯಬಲ್ಲರಂತೆ ಉಳಿದ 97% ಮಹಿಳೆಯರು ಮಾಡುತ್ತಾರೆ. ಭಾರತದ ಹೆಚ್ಚಿನ ಶಾಲೆಗಳು ನಡೆಯುತ್ತಿರುವುದೇ ಶಿಕ್ಷಕಿಯರಿಂದ.ದೇಶದಲ್ಲಿನ ಶಿಕ್ಷಕಿಯರ ಪ್ರಮಾಣ ಶೇ.61ಕ್ಕೂ ಹೆಚ್ಚು. ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ಶೇ.30ರಷ್ಟು ಮಹಿಳಾ ಡಾಕ್ಟರ್ಗಳು. ಶೇ.80ಕ್ಕೂ ಹೆಚ್ಚು ದಾದಿಯರಿದ್ದಾರೆ. ಬದ್ಧತೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಎಸ್ಬಿಐನಲ್ಲಿ (SBI) ಶೇ.26, ಪಿಎನ್ಬಿಯಲ್ಲಿ( PNB) ಶೇ.23, ಐಸಿಐಸಿಐ ಬ್ಯಾಂಕ್ನಲ್ಲಿ (ICICI) ಶೇ.32 ಮತ್ತು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ (HDFC) ಶೇ.21ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಮ್ಮೆ ಮಹಿಳಾ ದಿನದ ಶುಭಾಶಯಗಳು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತನ್ನ 14ನೇ ವಯಸ್ಸಿನಲ್ಲಿ ತಮ್ಮ ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸಿಕೊಳ್ಳಲು ಮನೆಯವರ ವಿರುದ್ಧವಾಗಿ ಉಪವಾಸ ಸತ್ಯಾಗ್ರಹ ಮಾಡುವುದರ ಮೂಲಕವಾಗಿ ಸ್ವಚ್ಛತಾ ಅಭಿಯಾನವನ್ನು ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಆಲೋಚನೆ ಮಾಡಿದ ಇಂದು ಕೊಪ್ಪಳ ಜಿಲ್ಲೆಯಲ್ಲಿ ಬಯಲು ಶೌಚ ಮುಕ್ತ ಜಿಲ್ಲೆಯಾಗಲು ತಮ್ಮದೇ ಆದ ಸೇವೆ ನೀಡಿದ ಜಿಲ್ಲಾಡಳಿತದಿಂದ ಗೌರವವನ್ನು ಪಡೆದ ಮಾದರಿ ಮಹಿಳೆ ಡಣಾಪುರದ ಮಲ್ಲಮ್ಮ ಅವರ ನ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಪ್ಪಳ ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಅವರು ಮಾತನಾಡಿ ಮಹಿಳೆಯರ ಸಾಮರ್ಥ್ಯದ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ ರೇಖಾ ಮಾತನಾಡಿ ಮಹಿಳೆಯರು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಬೇಕಾದ ಸಲಹೆಗಳನ್ನು ಮತ್ತು ಜೀವನ ವಿಧಾನ ಕ್ರಮಗಳನ್ನು ವಿವರಿಸಿದ್ದರು.ರ೦ಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಮಹಿಳೆಯರು ಪಾಲ್ಗೊಂಡು ಪ್ರಥಮ,ದ್ವಿತೀಯ, ತೃತೀಯ ಬಹುಮಾನವನ್ನು ಪಡೆಯುವದರ ಮೂಲಕವಾಗಿ ಕಾರ್ಯಕ್ರಮವನ್ನುಯಶಸ್ವಿಗೊಳಿಸಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ